ಉಡುಪಿ: ಆಭರಣ ತಯಾರಿಕಾ ಸಂಸ್ಥೆಯಲ್ಲಿ 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಮಲ್ಪೆ ನ.26 (ಉಡುಪಿ ಟೈಮ್ಸ್ ವರದಿ) : ಕೆಳಾರ್ಕಳಬೆಟ್ಟುವಿನ ಆಭರಣ ತಯಾರಿಕಾ ಸಂಸ್ಥೆಯಲ್ಲಿ 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ನಡೆದಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕೆಳಾರ್ಕಳಬೆಟ್ಟುವಿನ ಸ್ವರ್ಣೊದ್ಯಮ ಆಭರಣ ತಯಾರಿಕಾ ಸಂಸ್ಥೆಯ ಉಸ್ತುವಾರಿ ದೀಪಕ್ ರಾಮದಾಸ್ ನಾಯಕ್ ಅವರು ಪೊಲೀಸರಿಗೆ ದೂರು ನೀಡಿದ್ದು, ನ.25 ರಂದು
ಬೆಳಿಗ್ಗೆ ಆಭರಣಾ ಸಂಸ್ಥೆಯ ವರ್ಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಂಗಲ್ ದೀಪ್ ಮಂಡಲ್ ಎಂಬುವವರು ದೀಪಕ್ ರಾಮದಾಸ್ ನಾಯಕ್ ಅವರಿಗೆ ಕರೆ ಮಾಡಿ ಆಭರಣ ತಯಾರಿಕ ಘಟಕದಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ದೀಪಕ್ ರಾಮದಾಸ್ ನಾಯಕ್ ಅವರು ಘಟಕಕ್ಕೆ ಬಂದು ನೋಡಿದಾಗ ಆಭರಣ ತಯಾರಿಕಾ ಸಂಸ್ಥೆಯ ಬೀಗವನ್ನು ಒಡೆದು ಒಳ ನುಗ್ಗಿದ ಕಳ್ಳರು ಆಭರಣ ತಯಾರಿಸಲು ಇಟ್ಟಿದ್ದ ಚಿನ್ನ ಹಾಗೂ ಅರ್ಧ ತಯಾರಿಸಿದ ನೆಕ್ಲೆಸ್ ಮತ್ತು ಮೇಣದಲ್ಲಿ ಇರಿಸಿದ ಚಿನ್ನ ಸೇರಿ 6,30,000 ಮೌಲ್ಯದ 126 ಗ್ರಾಂ ಚಿನ್ನವನ್ನು ಕಳವು ಗೈದಿರುವುದು ಕಂಡು ಬಂದಿದೆ. ಈ ಬಗ್ಗೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ