ಉಪ್ಪಿನಂಗಡಿ:ಹಿಜಾಬ್ ವಿವಾದ ಬೆನ್ನಲೇ, ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು,
ಉಪ್ಪಿನಂಗಡಿ, ಜೂ.2 : ಇಲ್ಲಿನ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಹಿಜಾಬ್ ವಿವಾದ ಹೊಸ ಹೊಸ ರೂಪ ಪಡೆಯುತ್ತಿದೆ.
ಹಿಜಾಬ್ ಅವಕಾಶ ನೀಡದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇದೀಗ ಮತ್ತೊಂದು ಗುಂಪಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿರುವ ಘಟನೆ ನಡೆದಿದೆ.
ಕಾಲೇಜಿನಲ್ಲಿ ಹಿಜಾಬ್ ಕುರಿತಾಗಿ ಮೃದು ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ವಿದ್ಯಾರ್ಥಿಗಳು ಗುರುವಾರ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಈ ವಿದ್ಯಾರ್ಥಿಗಳು ಕಾಲೇಜು ವರಾಂಡದಲ್ಲಿ ನಿಂತಿದ್ದರು. ಇದೇ ವೇಳೆ ಹಿಜಾಬ್ ಪರವಾದ ವಿದ್ಯಾರ್ಥಿಗಳು ಕೂಡಾ ಗುಂಪಾಗಿ ಅಲ್ಲೇ ಜಮಾಯಿಸಿದ್ದರು. ಸುದ್ದಿ ತಿಳಿದ ಮಾಧ್ಯಮದವರು ಕಾಲೇಜಿಗೆ ತೆರಳಿದ್ದು, ಈ ವೇಳೆ ವಿದ್ಯಾರ್ಥಿಗಳ ಗುಂಪು ವರದಿಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಮಾಧ್ಯಮದವರ ಮೇಲೆ ವಿದ್ಯಾರ್ಥಿಗಳ ಗುಂಪು ಹಲ್ಲೆಗೆ ಮುಂದಾದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ನಡುವೆ ಘಟನೆಗೆ ಸಂಬಂಧಿಸಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದರೂ ಪೊಲೀಸರು ಸ್ಥಳಕ್ಕೆ ಆಗಮಿಸದೆ ಮೌನವಾಗಿದ್ದರು ಎಂದು ಮಾಧ್ಯಮದವರು ಆರೋಪಿಸಿದ್ದಾರೆ.