ಕುಂದಾಪುರ: ಬುದ್ದಿವಾದ ಹೇಳಿದಕ್ಕೆ ಹಲ್ಲೆ
ಕುಂದಾಪುರ: ಜೂ.6(ಉಡುಪಿ ಟೈಮ್ಸ್ ವರದಿ): ಬುದ್ದಿವಾದ ಹೇಳಿದಕ್ಕಾಗಿ ತನ್ನ ಸಂಬಂಧಿಯ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಈ ಬಗ್ಗೆ ಕುಂದಾಪುರದ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿನ ಅಬ್ದುಲ್ ರವೂಫ್ ಎಂಬವರು ತಮ್ಮ ಅಕ್ಕನ ಮಗ ದಾನೀಶ್ ಹಾಗೂ ಮತ್ತೋರ್ವ ಮಂಗಳೂರಿನ ಸಫಾನ್ ಎಂಬಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಜೂ.4 ರಂದು ಅಬ್ದುಲ್ ರವೂಫ್ ತಮ್ಮ ಅಕ್ಕನ ಮಗ ದಾನೀಶ ಎಂಬವನಿಗೆ ಬುದ್ದಿವಾದವನ್ನು ಹೇಳಿದಕ್ಕಾಗಿ ಜೂ.5 ರಂದು ಮಧ್ಯಾಹ್ನದ ವೇಳೆ ಅಬ್ದುಲ್ ರವೂಫ್ ಅವರು ತಮ್ಮ ಜೀಪ್ ನಲ್ಲಿ ಕುಂದಾಪುರಕ್ಕೆ ಹೋಗುತ್ತಿದ್ದ ವೇಳೆ ಶೆಟ್ರಕಟ್ಟೆ ಪೆಟ್ರೋಲ್ ಬಂಕಿನ ಬಳಿ ಮಂಗಳೂರಿನ ಸಫಾನ್ ಹಾಗೂ ದಾನೀಶ್ ರವರು ಅಬ್ದುಲ್ ರವೂಫ್ ಅವರ ಜೀಪನ್ನು ತಡೆದು ಬೈದು ಬೆದರಿಸಿದ್ದರು. ಈ ಬಗ್ಗೆ ಅವರು ತಮ್ಮ ಅಕ್ಕನ ಬಳಿ ತಿಳಿಸಲು ಮನೆಗೆ ಹೋಗುತ್ತಿದ್ದ ವೇಳೆ ಮನೆಯ ಅಂಗಳದಲ್ಲಿ ಇಬ್ಬರೂ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು ಹಲ್ಲೆ ಮಾಡಿದ್ದಾರೆ. ಈ ವೇಳೆ ಗಲಾಟೆ ಕೇಳಿ ಬಿಡಿಸಲು ಬಂದ ಮನೆಯವರಿಗೂ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.