ಪುತ್ತೂರು: ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತನ ಕೊಲೆ ಆರೋಪಿಯ ಭೀಕರ ಹತ್ಯೆ
ಪುತ್ತೂರು, ಜೂ 4: ಎರಡು ವರ್ಷಗಳ ಹಿಂದೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತನ ಹತ್ಯೆಯ ಪ್ರಮುಖ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್(28) ನನ್ನು ಪುತ್ತೂರು ತಾಲೂಕಿನ ಪೆರ್ಲಂಪಾಡಿ ಸಮೀಪ ಮಚ್ಚಿನಿಂದ ಭೀಕರವಾಗಿ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
2019ರ ಸೆ. 03ರಂದು ರಾತ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭ ಹಿಂಜಾವೇ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಅವರನ್ನು ಹತ್ಯೆ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಚರಣ್ ರಾಜ್, ಕಿರಣ್ ರೈ ಹಾಗೂ ಪ್ರೀತೇಶ್ ಶೆಟ್ಟಿ ಎಂಬವರನ್ನು ಬಂಧಿಸಲಾಗಿತ್ತು. ಇನ್ನು ಚರಣ್ ರಾಜ್ ಅವರ ಮೆಡಿಕಲ್ ಶಾಪ್ ನಾಳೆ ಪೆರ್ಲಂಪಾಡಿಯಲ್ಲಿ ಆರಂಭಗೊಳ್ಳಲಿದ್ದು, ಈ ಹಿನ್ನೆಲೆ ಅಲ್ಲಿ ಕೆಲಸ ನಿರತರಾಗಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದು ತಲ್ವಾರಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.