ಕಾರ್ಕಳ: 4 ಚೀಲ ಸಿಮೆಂಟ್ ಕಳುಹಿಸಿ 1.45 ಲಕ್ಷ ರೂ ನಗದು ದೋಚಿದ ಕಳ್ಳರು…!
ಕಾರ್ಕಳ ಜೂ.3 (ಉಡುಪಿ ಟೈಮ್ಸ್ ವರದಿ): ಕಸಬಾ ಗ್ರಾಮದಲ್ಲಿರುವ ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು 1.45 ರೂ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯಾಹ್ನದ ವೇಳ ನಡೆದಿದೆ.
ಮಠದಬೆಟ್ಟು ಪರಿಸರದ ಕೆ. ದೀಪಕ್ ಭಟ್ ಎಂಬವರಿಗೆ ಸೇರಿದ ಧ್ವನಿ ಎಂಟರ್ ಪ್ರೈಸಸ್ ಎಂಬ ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಕೆ.ದೀಪಕ್ ಭಟ್ ಅವರು ಅಂಗಡಿಯಲ್ಲಿ ಇಲ್ಲದ ಸಮಯದಲ್ಲಿ ಅಂಗಡಿಗೆ ಬಂದಿದ್ದ ಇಬ್ಬರು ಕಳ್ಳರು ಅಂಗಡಿಯಲ್ಲಿ ಇದ್ದ ಅಶೋಕ ಅವರ ಬಳಿ 4 ಚೀಲ ಸಿಮೆಂಟ್ ಬೇಕಾಗಿದ್ದು ಅಂಗಡಿಯ ಪಕ್ಕದಲ್ಲಿರುವ ಇಂಚರ ಎಂಬ ಮನೆಗೆ ಹಾಕುವಂತೆ ತಿಳಿಸಿದ್ದಾರೆ. ಅದರಂತೆ ಅಶೋಕರವರು ಸಿಮೆಂಟ್ ಚೀಲವನ್ನು ಇಂಚರ ಎಂಬ ಮನೆಗೆ ಹಾಕಿ ವಾಪಾಸ್ಸು ಅಂಗಡಿಗೆ ಬಂದಾಗ ಅಂಗಡಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಇರಲಿಲ್ಲ. ಈ ವೇಳೆ ಅಂಗಡಿಯ ಒಳಗೆ ನೋಡಿದಾಗ ಮೇಜಿನ ಡ್ರಾವರನ್ನು ಒಡೆದು ಅದರೊಳಗಿದ್ದ 1,45,000 ರೂ. ಹಣವನ್ನು ಕಳವು ಮಾಡಿಕೊಂಡು ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೆ. ದೀಪಕ್ ಭಟ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.