ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ) ವೇದಿಕೆಯಲ್ಲೇ ಕುಸಿದು ಬಿದ್ದು ಸಾವು
ಕೊಲ್ಕತ್ತಾ: ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ) ವೇದಿಕೆಯಲ್ಲೇ ಕುಸಿದು ಬಿದ್ದ ನಿಧನರಾಗಿದ್ದಾರೆ.
ಕೋಲ್ಕತಾದಲ್ಲಿ ನಜ್ರುಲ್ ಮಂಜ್ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್ನಲ್ಲಿ ಪಾಲ್ಗೊಂಡ ಕೆಕೆ ಹಾಡುತ್ತಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿದರು ಪ್ರಯೋಜನವಾಗಿಲ್ಲ.
ಕೋಲ್ಕತಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30ಕ್ಕೆ ನಗರದಲ್ಲಿ ಬೀಡುಬಿಟ್ಟಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಕೆಕೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ತುಂಬಿದ್ದರು. ಆದರೆ ಹಾಡುತ್ತಲೇ ಕುಸಿದ ಬಿದ್ದ ಕೆಕೆ ಬದುಕಿ ಬರಲೇ ಇಲ್ಲ.
ಕಾನ್ಸರ್ಟ್ನಲ್ಲಿ ಪಾಲ್ಗೊಂಡಿದ್ದಾಗಲೇ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ತೀರಾ ಸುಸ್ತು ಕಾಣಿಸಿಕೊಂಡ ಪರಿಣಾಮ ಕಾನ್ಸರ್ಟ್ನಿಂದ ಕೃಷ್ಣಕುಮಾರ್ ಕುನ್ನತ್ ತಮ್ಮ ಹೋಟೆಲ್ ರೂಮ್ಗೆ ಹಿಂದಿರುಗಿದರು. ಹೋಟೆಲ್ನಲ್ಲಿನ ಮೆಟ್ಟಿಲುಗಳನ್ನು ಹತ್ತುವಾಗ ಕೃಷ್ಣಕುಮಾರ್ ಕುನ್ನತ್ ಕುಸಿದುಬಿದ್ದರು ಎಂದು ವರದಿಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅರೂಪ್ ಬಿಸ್ವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೃಷ್ಣಕುಮಾರ್ ಕುನ್ನತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನವಾರ್ತೆ ಮನಸ್ಸಿಗೆ ನೋವು ತರಿಸಿದೆ. ಕೃಷ್ಣಕುಮಾರ್ ಕುನ್ನತ್ ‘ಕೆಕೆ’ ಅಂತಲೇ ಜನಪ್ರಿಯತೆ ಪಡೆದಿದ್ದರು. ಕೆಕೆ ಅವರ ಹಾಡುಗಳಲ್ಲಿ ಎಲ್ಲಾ ರೀತಿಯ ಭಾವನೆಗಳು ಇರುತ್ತಿದ್ದವು. ಎಲ್ಲಾ ವಯೋಮಾನದವರನ್ನ ತಮ್ಮ ಹಾಡುಗಳ ಮೂಲಕ ಕೆಕೆ ರಂಜಿಸಿದ್ದರು. ಕೆಕೆ ಅವರ ಹಾಡುಗಳ ಮೂಲಕ ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.