ಜಾತ್ರೆಯಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ: ವಿಧಾನಸಭೆಯಲ್ಲಿ ಆಡಳಿತ ವಿರೋಧ ಪಕ್ಷಗಳ ವಾಕ್ಸಮರ

ಬೆಂಗಳೂರು: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅನುವು ಮಾಡಿಕೊಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಬಿರುಸಿನ ಚರ್ಚೆ ನಡೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ರಾಜ್ಯದ ದೇವಾಲಯಗಳ ಜಾತ್ರೆ, ರಥೋತ್ಸವಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರ ವಿಧಾನಸಭೆಯಲ್ಲಿಂದು ಚರ್ಚೆಗೆ ಕಾರಣವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಯು.ಟಿ. ಖಾದರ್ ಅವರು ವಿಷಯ ಪ್ರಸ್ತಾಪಿಸಿ, ರಾಜ್ಯದ ಅಭಿವೃದ್ಧಿ ಯಾಗಬೇಕಾದರೆ ಸಾಮರಸ್ಯ, ಸಹೋದರತೆ ಇರಬೇಕು. ಆದರೆ, ಕೆಲ ಕ್ರೂರ ಮನಸ್ಸಿನವರು, ಹೇಡಿಗಳು, ಸಮಸ್ಯೆ ಗಳನ್ನು ಸೃಷ್ಟಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಇಂತದೆ ಧರ್ಮ ಅಂತ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಕೆಲವೆಡೆ ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ಧರ್ಮದವರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರುತ್ತಿದ್ದಾರೆ ಎಂದು ಹೇಳಿದರು. 

ಖಾದರ್ ಅವರ ಮಾತಿಗೆ ಆಕ್ಷೇಪವೆತ್ತಿದ ಆಡಳಿತ ಪಕ್ಷದ ರಘುಪತಿಭಟ್, ಹರೀಶ್ ಪೂಂಜಾ, ಸಂಜೀವ್ ಮಠ್ದೂರ್, ರೇಣುಕಾಚಾರ್ಯ ಸೇರಿದಂತೆ ಹಲವು ಸದಸ್ಯರು ಒಮ್ಮೆಗೆ ಎದ್ದು ನಿಂತು ಖಾದರ್ ಅವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಖಾದರ್ ಜತೆ ಮಾತಿನ ಚಕಮಕಿಗೆ ಇಳಿದರು. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ಹೇಡಿಗಳು ಯಾರು ಎಂದು ಖಾದರ್ ಹೇಳಬೇಕು ಎಂದು ರಘುಪತಿ ಭಟ್ ಮತ್ತು ಹರೀಶ್ ಪೂಂಜಾ ಪಟ್ಟು ಹಿಡಿದರು.  ಆಗ ಖಾದರ್ ಅವರು ನಾನು ಇಲ್ಲಿ ಯಾವುದೇ ಧರ್ಮದ ಹೆಸರು ಪ್ರಸ್ತಾಪ ಮಾಡಿಲ್ಲ. ಬಿಜೆಪಿ ಸದಸ್ಯರಿಗೆ ಆತಂಕ ಏಕೆ ಎಂದು ಹೇಳಿದರಾದರೂ ಬಿಜೆಪಿ ಸದಸ್ಯರುಗಳು ಮಾತ್ರ ಖಾದರ್ ವಿರುದ್ಧ ಹರಿಹಾಯ್ದರು.

ಈ ಗದ್ದಲದಲ್ಲೇ ಮಾತನಾಡಿದ ರೇಣುಕಾಚಾರ್ಯ ಅವರು, ನಮ್ಮ ಮಠಗಳು, ದೇವಸ್ಥಾನಗಳಲ್ಲಿ ಅನ್ಯ ಧರ್ಮಿಯರಿಗೆ ಅವಕಾಶ ಕೊಡುತ್ತೇವೆ. ಇವರು ಮಸೀದಿಗೆ ಹೋಗಲು ಬಿಡುತ್ತಾರಾ ಎಂದು ಪ್ರಶ್ನೆ ಮಾಡಿ ಹೇಡಿ ಎಂಬ ಪದವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಅಲ್ಲದೆ ಇಷ್ಟು ವರ್ಷ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದು ನೀವು ಎಂದು ಕಾಂಗ್ರೆಸ್ ಸದಸ್ಯರನ್ನು ಗುರಿಯಾಗಿಸಿ ವಾಗ್ಬಾಣ ಬಿಟ್ಟರು. ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗಳು ಮತ್ತೆ ಬಿರುಸಾದವು.

ಮಧ್ಯ ಪ್ರವೇಶಿಸಿದ ಸ್ಪೀಕರ್
ಆಗ ಸಭಾಧ್ಯಕ್ಷರು ಕಾನೂನ ಸಚಿವ ಮಾಧುಸ್ವಾಮಿ ಅವರೆ ನೀವೇ ಇದನ್ನೆಲ್ಲಾ ಸರಿಪಡಿಸಬೇಕು ಎಂದು ಹೇಳಿದಾಗ, ಸಚಿವ ಮಾಧುಸ್ವಾಮಿ ಆಡಳಿತ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಿ ಎಲ್ಲರನ್ನು ಅವರ ಆಸನದಲ್ಲಿ ಕುಳಿತುಕೊಳ್ಳುವಂತೆ ಮಾಡುವಲ್ಲಿ ಸಫಲರಾದರು. ಮತ್ತೆ ಮಾತು ಮುಂದುವರೆಸಿದ ಖಾದರ್, ಕೆಲವು ಧರ್ಮಕ್ಷೇತ್ರಗಳಲ್ಲಿ ಮುಸ್ಲಿಂ ಬಾಂಧವರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದೆಲ್ಲಾ ಬ್ಯಾನರ್ ಹಾಕಿದ್ದಾರೆ. ಇದು ಸರಿಯಲ್ಲ. ಕೆಲವೆಡೆ ಹಿಂದೂ ಸಹೋದರರೇ ಈ ಬ್ಯಾನರ್‌ಗಳನ್ನು ತೆಗೆದಿಸಿದ್ದಾರೆ ಅವರಿಗೆ ಅಭಿನಂದನೆ. ಇಂತಹ ಸಾಮರಸ್ಯ ಕದಡುವ ಕೆಲಸವನ್ನು ನಾವೆಲ್ಲರೂ ಸೇರಿ ಮಟ್ಟ ಹಾಕಬೇಕಿದೆ. ಕೋಮುವಾದಿಗಳ ಈ ವಿವಾದಿತ ಸಮಸ್ಯೆ ನೋಡಿ ನಾವು ಆನಂದಿಸಬಾರದು. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಮರಸ್ಯ ಕಾಪಾಡುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ದ್ವನಿಗೂಡಿಸಿದ ಕಾಂಗ್ರೆಸ್‌ನ ರಿಜ್ವಾನ್ ಹರ್ಷದ್, ಸಾಮರಸ್ಯ ಪರಂಪರೆ ಇತಿಹಾಸ ನಮ್ಮದು. ಅದನ್ನು ಕಾಪಾಡದಿದ್ದರೆ ಮುಂದಿನ ಪೀಳಿಗೆಗೆ ಕಷ್ಟವಾಗಲಿದೆ. ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಒಂದು ಸಮುದಾಯದ ವ್ಯಾಪಾರಿಗಳು ಬರಬಾರದು ಎಂದ ಫೋಸ್ಟರ್ ಹಾಕುವುದು ಸರಿಯಲ್ಲ. ಮಾರಿಗುಡಿ, ಬಪ್ಪನಾಡುದುರ್ಗಾ, ದುರ್ಗಾಪರಮೇಶ್ವರಿ ದೇವಸ್ಥಾನ ಸ್ಥಾಪಿಸಿರುವುದೇ ಮುಸ್ಲಿಂ ಸಮುದಾಯ ಎಂದರು. 

ಸರ್ಕಾರದ ಉತ್ತರವೇನು?
ಸದಸ್ಯರ ಪ್ರಸ್ತಾಪಗಳಿಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, 2002 ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಧಾರ್ಮಿಕ ಸಂಸ್ಥೆಗಳ ಸಮೀಪದ ಕಟ್ಟಡ, ಜಮೀನು, ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ. ಇದು ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾಡಿದ್ದು. ಬೇರೆ ಧರ್ಮದವರಿಗೆ ಅವಕಾಶ ಇಲ್ಲ ಎಂದಿದೆ. ನಾವೇನೂ ಮಾಡಲು ಬರಲ್ಲ. ದೇವಸ್ಥಾನದ ಆವರಣ ಬಿಟ್ಟು ಹೊರಗಡೆ ಆದರೆ ಅದನ್ನು ಸರಿಪಡಿಸಬಹುದು ಅಷ್ಟೆ ಎಂದು ಹೇಳಿ ಈ ಕುರಿತ ಚರ್ಚೆಗ ತೆರೆ ಎಳೆದರು.

Leave a Reply

Your email address will not be published. Required fields are marked *

error: Content is protected !!