| ಮಂಗಳೂರು: ಯಕ್ಷಗಾನದ ಪ್ರಸಿದ್ಧ ಕಲಾವಿದ, ದೇವಿ ಭಟ್ರು ಎಂದೇ ಹೆಸರು ಪಡೆದಿದ್ದ ಮುಳಿಯಾಲ ಭೀಮ ಭಟ್ (85) ಅವರು ಮಂಗಳವಾರ ಬೆಳಿಗ್ಗೆ ಕಾಂತಾವರದಲ್ಲಿ ನಿಧನರಾದರು.
ಸಕ್ರಿಯ ಯಕ್ಷಗಾನ ರಂಗದಿಂದ ನಿವೃತ್ತರಾದ ಬಳಿಕ ಕಾಂತಾವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗದಲ್ಲಿ ಶರೀರ, ಶಾರೀರದೊಂದಿಗೆ ಶ್ರೀದೇವಿಯ ಪಾತ್ರಕ್ಕೆ ಜೀವ ತುಂಬಿದ್ದ ಅವರನ್ನು ಯಕ್ಷಗಾನ ಅಭಿಮಾನಿಗಳು ದೇವಿ ಭಟ್ರು ಎಂದೇ ಕರೆಯುತ್ತಿದ್ದರು.
ದಿ. ಕುರಿಯ ವಿಠಲ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿದ್ದ ಭೀಮ ಭಟ್ಟರು ಐದನೇ ತರಗತಿ ಓದಿದವರು. ನಂತರ ಯಕ್ಷಗಾನ ಕಲಿತು ಧರ್ಮಸ್ಥಳ, ಕೂಡ್ಲು, ಕುಂಡಾವು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ರಂಗಸ್ಥಳದಲ್ಲಿ ವಿವಿಧ ಪಾತ್ರಗಳಲ್ಲಿ ಮೆರೆದರು. ಸ್ತ್ರೀವೇಷಗಳಲ್ಲದೆ ಪುರುಷ ಪಾತ್ರಗಳಿಗೂ ಜೀವ ತುಂಬಿದವರು.
1991ರಲ್ಲಿ ಅಪಘಾತಕ್ಕೀಡಾದ ಬಳಿಕ ಕುಗ್ಗಿದ್ದರಾದರೂ, ಯಕ್ಷಗಾನದಲ್ಲಿ ಮುಂದುವರಿದಿದ್ದರು. ಬಳಿಕ ವಯಸ್ಸಿನಿಂದಾಗಿ ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸುವುದು ಕಷ್ಟವಾದಾಗ ಕಾಂತಾವರ ದೇವಸ್ಥಾನದಲ್ಲಿ ಕೆಲಸಕ್ಕೆ ಸೇರಿದರು. ಮಳೆಗಾಲದಲ್ಲಿ ಯಕ್ಷಗಾನದ ತಂಡ ಕಟ್ಟಿಕೊಂಡು ದೇಶದ ವಿವಿಧೆಡೆ, ರಾಜ್ಯದ ವಿವಿಧೆಡೆ ಪ್ರದರ್ಶನವನ್ನು ಅವರು ಸಂಘಟಿಸುತ್ತಿದ್ದರು. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. | |