ಉಡುಪಿ: ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ- ಕ್ಯಾಂಪಸ್ ಫ್ರಂಟ್ ಖಂಡನೆ
ಉಡುಪಿ: ಇತ್ತೀಚಿನ ದಿನಗಳಲ್ಲಿ ಮಂಗಳೂರು ಮತ್ತು ಉಡುಪಿಯ ಹಲವೆಡೆ ನಿರ್ದಿಷ್ಟ ಧರ್ಮವನ್ನು ನಿಂದಿಸಿ, ಕೋಮು ವಿಷಬೀಜ ಬಿತ್ತುವ ಭಾಷಣಗಳನ್ನು ಸಂಘಪರಿವಾರದ ಕಾರ್ಯಕ್ರಮಗಳಲ್ಲಿ ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ ದೂರುಗಳು ಸಹ ದಾಖಲಾಗಿದೆ. ಈ ವಿಷಕಾರಿ ಭಾಷಣಗಳಿಂದ ಪ್ರಚೋದನಕ್ಕೊಳಗೊಂಡ ಕೆಲ ಬೀದಿ ಗೂಂಡಾಗಳು ಮುಸ್ಲಿಂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಇದನ್ನು ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿಯು ಖಂಡಿಸುತ್ತದೆ.
ಈ ಅಹಿತಕರ ಪ್ರಕರಣಗಳು ಸಂಬಂಧ ಪಟ್ಟ ಪೊಲೀಸ್ ಠಾಣೆಯ ಬೆಳಕಿಗೆ ಬಂದರು ಸಹ ಸ್ವತಃ ಪೊಲೀಸರೇ ದೂರುದಾರರ ಸ್ಥೈರ್ಯ ಕುಸಿಯುವಂತೆ ಬೆದರಿಸಿ, ಮಾರಣಾಂತಿಕ ಹಲ್ಲೆಯ ಕೇಸುಗಳನ್ನು ಠಾಣೆಯಲ್ಲೇ ಇತ್ಯರ್ಥಗೊಳಿಸಿ ಅಪರಾಧಿಗಳನ್ನು ಪೋಷಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಮಾಜಘಾತುಕ ಶಕ್ತಿಗಳು ಉದ್ವಿಗ್ನ ವಾತವರಣ ಸೃಷ್ಠಿಸಲು ಪೊಲೀಸರೇ ಕಾರಣಕರ್ತರಾಗಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸುವ ಗೂಂಡಾಗಳನ್ನು ಪೊಲೀಸ್ ಇಲಾಖೆಯು ಹೆಡೆ ಮುರಿ ಕಟ್ಟಿ ನಿಯಂತ್ರಿಸ ದಿದ್ದರೆ ಮುಂದಾಗುವ ಎಲ್ಲಾ ಬೆಳವಣಿಗೆಗಳಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಿರುತ್ತೆ. ಜನರ ನಂಬಿಕೆಯನ್ನು ಉಳಿಸಿ ಕೊಂಡು, ಸಂವಿಧಾನಕ್ಕೆ ಬದ್ಧವಾಗಿ ಪೊಲೀಸರು ಕಾರ್ಯನಿರ್ವಹಿಸಬೇಕು ಮತ್ತು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಜಿಲ್ಲೆಯ ಶಾಂತಿಯನ್ನು ಕಾಪಾಡಲು ಕ್ರಮ ವಹಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಅಸೀಲ್ ಆಗ್ರಹಿಸಿದ್ದಾರೆ.





