ಜಾಲತಾಣದಲ್ಲಿ ಹುಡುಗಿ ಹುಡುಕುತಿದ್ದ ರಾಮಕೃಷ್ಣಗಾಣಿಗ- ಸುಪಾರಿ ಕಿಲ್ಲರ್’ಗೆ 10 ದಿನ ಪೊಲೀಸ್ ಕಸ್ಟಡಿ
ಉಡುಪಿ ಜು.23 (ಉಡುಪಿ ಟೈಮ್ಸ್ ವರದಿ): ಉಡುಪಿಯಲ್ಲಿ ಸಂಚಲನ ಸೃಷ್ಟಿಸಿದ್ದ ಬ್ರಹ್ಮಾವರದ ವಿಶಾಲ ಗಾಣಿಗ ಅವರ ಕೊಲೆ ಪ್ರಕರಣದ ಬಂಧಿತ ಆರೋಪಿ ಸುಪಾರಿ ಕಿಲ್ಲರ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಚಾರ್ಪನ್ ಬಹುರಾಗ್ ಗ್ರಾಮದ ನಿವಾಸಿ ಸುಪಾರಿ ಕಿಲ್ಲರ್ ಸ್ವಾಮಿನಾಥ ನಿಶಾದನನ್ನು ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರಕರಣಕ್ಕೆ ಸಂಬಧಿಸಿ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣನೇ ಸಂಚು ರೂಪಿಸಿ ಸುಪಾರಿ ನೀಡಿ ಕೊಲೆ ಗೈದಿರುವುದಾಗಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುವ ಸಲುವಾಗಿ ಸ್ವಾಮಿನಾಥನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಲ್ಲದೆ ಪ್ರಕರಣದ ಆರೋಪಿ ಇನ್ನೋರ್ವ ಸುಪಾರಿ ಕಿಲ್ಲರ್ ತಲೆ ಮರೆಸಿಕೊಂಡಿದ್ದಾನೆ. ಈಗಾಗಲೇ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈತನ ಕುರಿತು ಪ್ರಮುಖ ಸುಳಿವು ಲಭ್ಯವಾಗಿರುವ ಹಿನ್ನೆಲೆ ಶೀಘ್ರ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇತ್ತ 6 ತಿಂಗಳ ಹಿಂದೆ ಪತ್ನಿ ಕೊಲೆಗೆ ಸಂಚು ರೂಪಿಸಿದ್ದ ರಾಮಕೃಷ್ಣ ಒಂದು ವರ್ಷಗಳ ಹಿಂದೆಯೇ ವೈವಾಹಿಕ ಸಂಬಂಧಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣವೊಂದರಲ್ಲಿ ಸಕ್ರಿಯವಾಗಿದ್ದ ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿದೆ. ಇನ್ನು ರಾಮಕೃಷ್ಣನನ್ನು 4 ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು, ಹೆಚ್ಚಿನ ತನಿಖೆಗೆ ಮತ್ತೆ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.