ಕೊಲ್ಕತ್ತಾ: ಬಿಜೆಪಿಯ ಇಬ್ಬರು ಸಂಸದರು ಶಾಸಕ ಸ್ಥಾನಕ್ಕೆ ರಾಜೀನಾಮೆ

ಕೊಲ್ಕತ್ತಾ: ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯಬಲ 77ರಿಂದ 75ಕ್ಕೆ ಇಳಿದಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಿಜೆಪಿಯ ಇಬ್ಬರು ಸಂಸದರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹೈಕಮಾಂಡ್ ಆದೇಶದಂತೆ ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ .

ಬಿಜೆಪಿಯ ಕ್ರಮವನ್ನು ಲೋಕಸಭೆಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಕ್ರಮ ಇದಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಎಲ್ಲ ಬಿಜೆಪಿ ಶಾಸಕರಿಗೆ ಕೇಂದ್ರೀಯ ಭದ್ರತೆ ನೀಡಿರುವ ಕೇಂದ್ರ ಸರ್ಕಾರದ ಕ್ರಮ ತೆರಿಗೆದಾರರ ಹಣದ ದುರ್ಬಳಕೆ ಎಂದು ಟಿಎಂಸಿ ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಕನಸಿನೊಂದಿಗೆ ಮುಂದೆ ಸರ್ಕಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂಬ ಉದ್ದೇಶದಿಂದ ನಿಶಿತ್ ಪ್ರಮಾಣಿಕ್ ಮತ್ತು ಜಗನ್ನಾಥ್ ಸರ್ಕಾರ್ ಸೇರಿದಂತೆ ಹಲವು ಮಂದಿ ಸಂಸದರನ್ನು ವಿಧಾನಸಭೆ ಕಣಕ್ಕೆ ಇಳಿಸಲಾಗಿತ್ತು. ಆದರೆ ಈ ಪೈಕಿ ಇಬ್ಬರು ಮಾತ್ರ ಗೆಲುವು ಸಾಧಿಸಿದ್ದರು. ಆದ್ದರಿಂದ ಈ ಇಬ್ಬರು ಲೋಕಸಭೆಯಲ್ಲೇ ಹೆಚ್ಚು ಉಪಯುಕ್ತ ಎಂಬ ಕಾರಣಕ್ಕೆ ಬಿಜೆಪಿ, ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿತ್ತು.

“ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಬಿಜೆಪಿ ಸರ್ಕಾರ ರಚಿಸಿದ್ದರೆ, ನಿರ್ದಿಷ್ಟ ಪಾತ್ರ ವಹಿಸಬಹುದಿತ್ತು. ಆದರೆ ಹಾಗಾಗಲಿಲ್ಲ. ಆದ್ದರಿಂದ ಶಾಸಕತ್ವಕ್ಕೆ ರಾಜೀನಾಮೆ ನೀಡಿಸಂಸತ್ ಸದಸ್ಯತ್ವವನ್ನೇ ಉಳಿಸಿಕೊಳ್ಳುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದೆ’ ಎಂದು ರಾಣಾಘಾಟ್ ಸಂಸದ ಜಗನ್ನಾಥ್ ಸರ್ಕಾರ್ ಹೇಳಿದ್ದಾರೆ. ನಾದಿಯಾ ಜಿಲ್ಲಾಯ ಶಾಂತಿಪುರದಿಂದ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಿಜೆಪಿಯ ಎಲ್ಲ ಶಾಸಕರಿಗೆ ಕೇಂದ್ರೀಯ ಭದ್ರತೆಯನ್ನು ಒದಗಿಸಲು ಕೇಂದ್ರ ಗೃಹಸಚಿವಾಲಯ ನಿರ್ಧರಿಸಿದ್ದು, ಅವರಿಗೆ ಇರುವ ಅಪಾಯ ಸಾಧ್ಯತೆಯನ್ನು ಪರಾಮರ್ಶಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಪ್ರತಿ ತಿಂಗಳು ಇವರ ಭದ್ರತಾ ವೆಚ್ಚವಾದ 1.5 ಕೋಟಿ ರೂಪಾಯಿಗಳನ್ನು ಗೃಹ ಸಚಿವಾಲಯ ಭರಿಸಲಿದೆ.

Leave a Reply

Your email address will not be published. Required fields are marked *

error: Content is protected !!