ಕುಂದಾಪುರ ಸರಕಾರಿ ಆಸ್ಪತ್ರೆ ಮುಚ್ಚಿಸುವ ಹುನ್ನಾರ, ಪ್ರತಿಭಟನೆಯ ಎಚ್ಚರಿಕೆ: ಪ್ರತಾಪ್ ಚಂದ್ರ ಶೆಟ್ಟಿ

ಉಡುಪಿ ಎ.29 (ಉಡುಪಿ ಟೈಮ್ಸ್ ವರದಿ): ಕುಂದಾಪುರ ತಾಲ್ಲೂಕು ಸರಕಾರಿ ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ಸ್ವಹಿತಾಸಕ್ತಿಗಾಗಿ ಮುಚ್ಚಿಸುವ ಹುನ್ನಾರ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಚಂದ್ರ ಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು,ಈ ಹಿಂದೆ ಎ.21 ರಂದುಕುಂದಾಪುರ ತಾಲೂಕಿನ ಸರಕಾರಿ ಆಸ್ಪತ್ರೆಯ ಹೊಸಕಟ್ಟಡವನ್ನು ಕೋವಿಡ್ 19 ರೋಗಿಗಳಿಗೆ ಮಾತ್ರ ಮೀಸಲಿರಿಸಿ, ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗಗಳನ್ನು ಆಸ್ಪತ್ರೆಯ ಹಳೆ ಬ್ಲಾಕ್ ಕಟ್ಟಡದಲ್ಲಿಯೇ ಮುಂದುವರಿಸಿ, ಸಾಮಾನ್ಯ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಈ ಪತ್ರವನ್ನು ಪರಿಗಣಿಸದೆ, ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ 19 ರೋಗಿಗಳಿಗೆ ಮಾತ್ರ ಮೀಸಲಿಟ್ಟು, ಏಕಾಏಕಿಯಾಗಿ ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿರುವುದು ಖಂಡನೀಯ ಹಾಗೂ ಜನವಿರೋಧಿ ಕ್ರಮವಾಗಿರುತ್ತದೆ. 

ಕುಂದಾಪುರ ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ 30444 ಜನಸಂಖ್ಯೆ ಇದ್ದು, ಪುರಸಭೆಯನ್ನು ಹೊರತುಪಡಿಸಿ ಕುಂದಾಪುರ ತಾಲೂಕಿನ ಇತರೇ ಪ್ರದೇಶಗಳು 223296 ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೆ ಪುರಸಭೆ ಸೇರಿದಂತೆ ಅನುಪಾಸಿನ ಗ್ರಾಮಗಳ ಬಡ ಹಿಂದುಳಿದ ಜನರು ತಮ್ಮ ಚಿಕಿತ್ಸೆಗಾಗಿ ಕುಂದಾಪುರ ತಾಲ್ಲೂಕು ಆಸ್ಪತ್ರೆಯನ್ನೇ  ಆಶ್ರಯಿಸಿರುತ್ತಾರೆ ಹಾಗೂ ಸುತ್ತಮುತ್ತಲಿನ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಕೂಡಾ ಈಆಸ್ಪತ್ರೆಯನ್ನುಅವಲಂಭಿಸಿದೆ. ಆದರೆ  ಈಗ ಕೋವಿಡ್ ನೆಪ ನೀಡಿ ಸಾಮಾನ್ಯ ರೋಗಿಗಳಿಗೆ ದೂರದ ಜಿಲ್ಲಾಸ್ಪತ್ರೆಗೆ ಹೋಗುವ ಅನಿವಾರ್ಯತೆ ಸೃಷ್ಟಿಸಿರುವುದು, ಆರ್ಥಿಕವಾಗಿ ಹಿಂದುಳಿದ ಬಡರೋಗಿಗಳು ತಮ್ಮ ಚಿಕಿತ್ಸೆಗಾಗಿ ಅನಿವಾರ್ಯವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸುವಂತೆ ಮಾಡುವ ಹುನ್ನಾರವೆಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕುಂದಾಪುರ ತಾಲೂಕು ಹೊರತುಪಡಿಸಿ, ಉಡುಪಿ ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳು ಹಾಗೂ ಕೋವಿಡ್ 19 ರೋಗಳಿಗೆ ಸಮಾನ ಅವಕಾಶ ನೀಡಿ ಪ್ರತ್ಯೇಕವಾಗಿ ಅಗತ್ಯ ನುರಿತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿಭಾಗ ಮಟ್ಟದ ಆಸ್ಪತ್ರೆಯಾಗಿರುವ ಕುಂದಾಪುರದಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ, ಅದೇ ಆಸ್ಪತ್ರೆಯ ಹೊಸಕಟ್ಟಡವು 250 ರಿಂದ 300 ಹಾಸಿಗೆಗಳನ್ನು ಹೊಂದಿ ಕೋವಿಡ್ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಕೂಡಾ ದುರುದ್ದೇಶಪೂರ್ವಕವಾಗಿ, ಒಳರೋಗಿ ಮತ್ತು ಹೊರರೋಗಿ ವಿಭಾಗವನ್ನೇ ಉಡುಪಿಗೆ ಸ್ಥಳಾಂತರಿಸಲಾಗಿದೆ.

ಸರ್ಕಾರಿ ಆಸ್ಪತ್ರೆಯ ಹೊರಗೆ ಪ್ರತ್ಯೇಕವಾಗಿ ಕೋವಿಡ್ ಆಸ್ಪತ್ರೆಗಳನ್ನು ವ್ಯವಸ್ಥೆಗೊಳಿಸಿದ ನಿದರ್ಶನಗಳಿವೆಯೇ ಹೊರತು, ಕೋವಿಡ್ ಕೇಂದ್ರಕ್ಕಾಗಿ ಇರುವ ಸರಕಾರಿ ಆಸ್ಪತ್ರೆಯನ್ನೇ ಹೊರಗಿಟ್ಟಿರುವುದು ಎಲ್ಲಿಯೂ ಕಂಡು ಬರುವುದಿಲ್ಲ. ಇಂತಹ ಸ್ಟೇಚ್ಚಾಚಾರದ, ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ. ‌‌‌ಆದ್ದರಿಂದ ತುರ್ತಾಗಿ ಈ ಬಗ್ಗೆ ಗಮನಹರಿಸಿ ಸರ್ಕಾರಿ ಆಸ್ಪತ್ರೆಯಿರುವುದು ಜನರ ಸೇವೆಗಾಗಿಯೇ ಹೊರತು ಖಾಸಗಿ ಆಸ್ಪತ್ರೆಗಳ ಅನುಕೂಲಕ್ಕಾಗಿ ಅಲ್ಲ ಎನ್ನುವುದನ್ನು ಗಮನದಲ್ಲಿರಿಸಿಕೊಂಡು, ಈ ಸ್ಟೇಚ್ಚಾಚಾರದ, ನಿಯಮಬಾಹಿರ ಜನವಿರೋಧಿ ಕ್ರಮವನ್ನು ತುರ್ತಾಗಿ ಸರಿಪಡಿಸುವುದರೊಂದಿಗೆ, ಕುಂದಾಪುರ ಸರಕಾರಿ ಆಸ್ಪತ್ರೆಯ ಹೊಸಕಟ್ಟಡವನ್ನು ಕೋವಿಡ್ 19 ರೋಗಿಗಳಿಗೆ ಮಾತ್ರ ಮೀಸಲಿರಿಸಿ, ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗಗಳನ್ನು  ಈ ಹಿಂದಿನಂತೆ ಆಸ್ಪತ್ರೆಯ ಹಳೆಯ ಬ್ಲಾಕ್ ಕಟ್ಟಡದಲ್ಲಿಯೇ ಮುಂದುವರಿಸಿ, ಸಾಮಾನ್ಯ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಕೋರುತ್ತೇವೆ. 

ಒಂದು ವೇಳೆ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಸಮಸ್ಯೆ ಸರಿಪಡಿಸುವವರೆಗೂ ಈ ಜನವಿರೋಧಿ ಕ್ರಮದ ವಿರುದ್ಧ ಜನಾಭಿಪ್ರಾಯ ಮೂಡಿಸುವುದರೊಂದಿಗೆ ನಿರಂತರವಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿ ಯವರಿಂದ ಪ್ರತಿಕ್ರಿಯೆ ಬಯಸುತ್ತಿರುವುದಾಗಿಯೂ ಪತ್ರದಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!