ಪ್ರಸಾದ್ ನೇತ್ರಾಲಯ: ವಡನಗರದಲ್ಲಿ 6ನೇ ವರ್ಷದ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ, ಶಸ್ತ್ರಚಿಕಿತ್ಸಾ ಶಿಬಿರ

ಭಾರತದ ಪ್ರಧಾನ ಮಂತ್ರಿಗಳ 76ನೇ ಜನ್ಮದಿನ ಆಚರಿಸುತ್ತಿರುವ ಸಂದರ್ಭದಲ್ಲಿ ಹಾಗೂ ಅವರು ರಾಜಕೀಯ ಜೀವನದ 25 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಅವರ ಹುಟ್ಟೂರಾದ ಗುಜರಾತ್ ರಾಜ್ಯದ ವಡನಗರದಲ್ಲಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸತತ 6ನೇ ವರ್ಷದ ಉಚಿತ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಸರ್ವೋದಯ ಸೇವಾ ಟ್ರಸ್ಟ್, ಅಹಮದಾಬಾದ್, ಓನ್ ಸೈಟ್ ಎಕ್ಸಿಲಾರ್, ಲಕ್ಸೋಟಿಕಾ ಫೌಂಡೇಶನ್, ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಸಲಾಯಿತು.

ಪ್ರಧಾನಿಯವರ ಹಿರಿಯ ಸಹೋದರ ಸೋಮ್‌ಭಾಯಿ ಮೋದಿಯವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕರಾದ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಯಾದ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಅವರು ಮಾತನಾಡುತ್ತಾ, ಜಗತ್ತು ಕಂಡಂತಹ ಅತಿ ವಿಶಿಷ್ಟ ನಾಯಕ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಅವರ ಜನ್ಮದಿನದಂದು ಕಳೆದ 6 ವರ್ಷಗಳಿಂದ ನಮ್ಮ ಆಸ್ಪತ್ರೆ ಹಾಗೂ ಟ್ರಸ್ಟ್ ವತಿಯಿಂದ ಇಲ್ಲಿನ ಜನರಿಗೆ ನೇತ್ರ ಚಿಕಿತ್ಸೆಯಲ್ಲಿ ನಾವು ನೀಡುತ್ತಿರುವ ಸೇವೆಗೆ ಅವಕಾಶ ದೊರೆತಿರುವುದಕ್ಕಾಗಿ ಕೃತಜ್ಞರಾಗಿದ್ದೇವೆ ಎಂದರು.

ಪ್ರಧಾನಿಯವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಘೋಷಣೆಯಡಿಯಲ್ಲಿ ನಾವೆಲ್ಲರೂ ಇಂದು ಕಾರ್ಯತತ್ಪರರಾಗಬೇಕಾಗಿದೆ. ವ್ಯವಸ್ಥೆಯ ಕೊರತೆಯಿಂದ ಯಾವುದೇ ಭಾರತೀಯನು ಕಣ್ಣಿನ ಚಿಕಿತ್ಸೆಯಿಂದ ವಂಚಿತನಾಗಬಾರದು. ದೃಷ್ಟಿ ಎಂಬುದು ಒಂದು ವಿಶೇಷಾಧಿಕಾರವಲ್ಲ. ಅದೊಂದು ಜೀವನದ ಅಗತ್ಯತೆ.

ತಪ್ಪಿಸಬಹುದಾದ ಅಂಧತ್ವ ಹಾಗೂ ಕಣ್ಣಿನ ಚಿಕಿತ್ಸೆಯಿಂದ ಕೋಟ್ಯಾಂತರ ಭಾರತೀಯರ ಶೈಕ್ಷಣಿಕ ಉನ್ನತಿ, ಉತ್ಪಾದಕತೆ ಹೆಚ್ಚಳ, ಗೌರವ ಮತ್ತು ಜೀವನಮಟ್ಟವನ್ನು ಹೆಚ್ಚಿಸಬಹುದಾಗಿದೆ. ಆದ್ದರಿಂದ ಭಾರತಾದ್ಯಂತ ನೇತ್ರ ಚಿಕಿತ್ಸೆಗೆ ವಿಶೇಷ ಸೌಲಭ್ಯ ಹಾಗೂ ಅವಕಾಶಗಳನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ನೀಡಬೇಕು ಮತ್ತು ಇದೊಂದು ರಾಷ್ಟ್ರೀಯ ಆಂದೋಲನವಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಧಾನಿಯವರ ಸಹೋದರ ಪುತ್ರ, ಸರ್ವೋದಯ ಸೇವಾ ಟ್ರಸ್ಟ್‌ನ ಜೀತುಭಾಯಿ ಮೋದಿಯವರು ಮಾತನಾಡುತ್ತಾ, ಪ್ರಸಾದ್ ನೇತ್ರಾಲಯವು ಕಳೆದ 6 ವರ್ಷಗಳಿಂದ ಪ್ರಧಾನಿಯವರ ಜನ್ಮದಿನದಂದು ನಡೆಸುತ್ತಿರುವ ನೇತ್ರ ಆರೋಗ್ಯ ಶಿಬಿರ ಸೇವೆಯು ಮಾದರಿ ಜನಸೇವೆಯಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಡುಪಿಯಿಂದ ಬಹಳ ದೂರದ ಈ ಊರಿಗೆ ಬಂದು ಶಿಬಿರ ನಡೆಸುವುದು ಸಾಮಾನ್ಯ ಕೆಲಸವಲ್ಲ. ಅವರ ಈ ಶ್ರಮ ಅಭಿನಂದನಾರ್ಹವಾಗಿದೆ ಎಂದರು.

ಸೋಮ್‌ಭಾಯಿ ಮೋದಿಯವರು ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿಸನಗರದ ಜ್ಯೋತಿ ಹಾಸ್ಪಿಟಲ್ ಇವರ ಸಹಯೋಗದೊಂದಿಗೆ ‘ನೇತ್ರದಾನ, ಅಂಗಾಂಗದಾನ ವಾಗ್ದಾನ ಕಾರ್ಯಕ್ರಮ ಮತ್ತು ರಕ್ತದಾನ ಕಾರ್ಯಕ್ರಮಗಳು’ ನಡೆಯಿತು.

ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 720 ಜನರ ತಪಾಸಣೆ ನಡೆಸಲಾಯಿತು, 534 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು ಹಾಗೂ 92 ಜನರನ್ನು ಉಚಿತ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಜಶುಭಾಯಿ ಚೌಧರಿ, APMC ಚೇರ್‌ಮನ್ ರಾಮ್‌ಜಿ ಭಾಯಿ ಚೌಧರಿ, ಡಾ. ದೀಪಕ್ ಪಟೇಲ್, GMERS ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸುನೀಲ್ ಓಝಾ, ಡಾ. ಮುಖೇಶ್ ವೋರಾ, ನೇತ್ರ ವಿಭಾಗದ ಮುಖ್ಯಸ್ಥ ಡಾ. ದೀಪಕ್ ಪಟೇಲ್, ಡಾ. ರಶ್ಮಿನ್ ಕಲಸ್ವಾ, ಡಾ. ಎಮ್ರಿನ್ ಬನ್ವಾ, ಜಿಲ್ಲಾ ಸಚಿವೆ ಕಮಲಾ ಭಾಯಿ ಪಟೇಲ್, ಸಮಾಜ ಸೇವಕ ಗೋವಿಂದ್ ಭಾಯಿ ಪರಮಾರ್, ಪಾರುಲ್ ಬೆನ್ ಓಝಾ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!