ಸುಮನಸಾ ಕೊಡವೂರು ರಜತ ಮಹೋತ್ಸವ: ಮನ ತಟ್ಟಿದ ‘ಮಾ ನಿಷಾದ’ 

ಉಡುಪಿ: ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಮಾ ನಿಷಾದ’ ನಾಟಕ ವಾಚನವು ಕೇಳುಗರ ಮನ ತಟ್ಟಿತು. ಅಕ್ಷರಗಳಿಂದ ರಂಗಾನುಭದವರೆಗಿನ ಪ್ರಸ್ತುತಿಯು ವಿಶಿಷ್ಟ ಅನುಭೂತಿ ನೀಡಿತು.

ರಂಗಭೂಮಿಯಂತೆ ವೇದಿಕೆ ಬೇಕಾಗಿಲ್ಲದ, ಧ್ವನಿಯಲ್ಲೇ ಕಲ್ಪನೆಯ ರಂಗಭೂಮಿಯನ್ನು ಕಟ್ಟಿಕೊಡುವ, ಅಕ್ಷರಗಳಿಗೆ ಧ್ವನಿ, ಸಂಭಾಷಣೆಗಳಿಗೆ ಭಾವ ಮತ್ತು ಪಾತ್ರಗಳಿಗೆ ಜೀವ ತುಂಬುವ ನಾಟಕ ವಾಚನವು ಪ್ರೇಕ್ಷಕರ ಮನದಲ್ಲೇ ಪಾತ್ರಗಳು ಜೀವಪಡೆದವು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ರಚನೆಯ ‘ಮಾ ನಿಷಾದ’ ನಾಟಕ ವಾಚನದಲ್ಲಿ ಋಷಿ ವಾಲ್ಮೀಕಿಯಾಗಿ ಎಂ.ಎಸ್. ಭಟ್,  ಅಗಸನಾಗಿ ಅಕ್ಷತ್ ಅಮೀನ್, ಅಗಸನ ಹೆಂಡತಿಯಾಗಿ ಸೌಭಾಗ್ಯ ಲಕ್ಷ್ಮೀ, ಭರತನಾಗಿ ನಾಗೇಶ್ ಪ್ರಸಾದ್, ವಸುಧಮ್ಮ ಹಾಗೂ ಸೀತೆಯಾಗಿ ಕವನ ಕುಂದರ್, ದಾರಿಹೋಕನಾಗಿ ಕಾರ್ತಿಕ್ ಪ್ರಭು, ಸೈನಿಕನಾಗಿ ಮುರುಗೇಶ್, ದ್ವಾರಪಾಲಕನಾಗಿ ಶ್ರೀವತ್ಸ ರಾವ್ ಪಾತ್ರಗಳಿಗೆ ಜೀವ ತುಂಬಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರಂಗಕರ್ಮಿ ಹಾಗೂ ನೀನಾಸಂ ಪದವೀಧರ ಜಯರಾಮ ನೀಲಾವರ ಮಾತನಾಡಿ, ‘ಹೊಸತನಕ್ಕೆ ಸದಾ ತೆರೆದುಕೊಳ್ಳುತ್ತಿರುವ, ವಿನೂತನ ಪ್ರಯೋಗದಲ್ಲಿ ಮುಂಚೂಣಿಯಲ್ಲಿರುವ ಸುಮನಸಾ ತಂಡವು ಈ ಬಾರಿ ನಾಟಕ ವಾಚನದ ಮೂಲಕ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ’ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಮಾತನಾಡಿ, ‘ಹೊಸ ಬೆರಗಿನ ಕಾರ್ಯಕ್ರಮವನ್ನು ರೂಪಿಸಿ, ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಎಂಎಸ್ ಭಟ್ , ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಉಪಸ್ಥಿತರಿದ್ದರು. ಪ್ರಿಯಾ ಪ್ರವೀಣ್ ಸ್ವಾಗತಿಸಿದರು, ಅಂಬಿಕಾ ವಂದಿಸಿದರು, ರಾಗಿಣಿ ಹರೀಶ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!