ಸಹಕಾರ ಸಪ್ತಾಹದ ದಿನಾಂಕ ಬದಲಾಯಿಸಿ ನೆಹರೂ ಅವರ ಕೊಡುಗೆಗಳನ್ನು ಕ್ಷೀಣಗೊಳಿಸುವ ಹುನ್ನಾರ-ಅಲೆವೂರು ಹರೀಶ್ ಕಿಣಿ
ಉಡುಪಿ: ಸ್ವತಂತ್ರ ಭಾರತದ ಅಭ್ಯುದಯದಲ್ಲಿ ಸಹಕಾರ ಕ್ಷೇತ್ರದ ಮಹತ್ವವನ್ನು ಮನಗಂಡ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಾನ್ಯತೆಯನ್ನು ನೀಡಿದರು.ಆ ಕಾರಣಕ್ಕಾಗಿ ಅವರ ಜನ್ಮ ದಿನಾಂಕ ನವೆಂಬರ್ 14 ರಿಂದ ಒಂದು ವಾರಗಳ ಕಾಲ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ 7 ದಶಕಗಳಿಂದ ಆಚರಿಸಲಾಗುತ್ತಿದೆ. ಆದರೆ ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೂತನ ಸಹಕಾರಿ ಸಚಿವಾಲಯ ಆರಂಭಿಸಿ 5 ವರ್ಷ ಕಳೆದಿರುವ ಹೆಸರಿನಲ್ಲಿ ಜೂನ್ 26 ರಿಂದ ಜುಲೈ 6 ರವರೆಗೆ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ ಆಚರಿಸಲು ನಿರ್ಧರಿಸಿದೆ.
ಈ ದಿನಾಂಕ ಬದಲಾವಣೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ,ಸಹಕಾರಿ ಧುರೀಣ ಅಲೆವೂರು ಹರೀಶ್ ಕಿಣಿ ಅವರು ಇದು ಬಿಜೆಪಿ ಸರಕಾರದ ನೆಹರೂ ಅವರನ್ನು ಅವಮಾನಿಸುವ ಮುಂದುವರಿದ ಚಾಳಿ.ಅವರ ಕೊಡುಗೆಗಳನ್ನು ಕ್ಷೀಣಗೊಳಿಸಲು ನಡೆಸಿರುವ ಹುನ್ನಾರ.ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಹೆಸರನ್ನು ಬದಲಾಯಿಸಿ VGRAMGI ಎಂದು ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಅಳಿಸಲು ನಡೆಸಿದ ಪ್ರಯತ್ನದ ಇನ್ನೊಂದು ಮಜಲು.
ಆದುದರಿಂದ ಸಹಕಾರ ಸಪ್ತಾಹದ ದಿನಾಂಕ ಬದಲಿಸದೇ ನ.14 ರಂದೇ ಆರಂಭಿಸಬೇಕು ಎಂದು ಮನವಿ ಮಾಡಿ ಈ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೂ ಈ ಕುರಿತು ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜ್ಯ ಸಹಕಾರ ಸಂಘಗಳ ನಿಬಂಧಕರು ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಯೂನಿಯನ್ಗಳಿಗೆ ನೀಡಿರುವ ಆದೇಶವನ್ನು ಹಿಂಪಡೆಯುವ ಸೂಚನೆ ನೀಡುವಂತೆ ವಿನಂತಿಸಿದ್ದಾರೆ.





