ಜೆಡಿಎಸ್-ಬಿಜೆಪಿ ಅಡ್ಡ ಮತದಾನ- ಕಾಂಗ್ರೆಸ್ನ 5ನೇ ಅಭ್ಯರ್ಥಿಗೆ ಗೆಲುವು!
ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ 5ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದು ಜೆಡಿಎಸ್ ಅಭ್ಯರ್ಥಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆ 32 ಮತಗಳು ಸಿಕ್ಕಿದ್ದರೆ ಜೆಡಿಎಸ್ ನ ಗೋವಿಂದರಾಜುಗೆ ಕೇವಲ 14 ಮತಗಳು ಮಾತ್ರ ಬಂದಿವೆ. ಜೆಡಿಎಸ್ ನಿಂದ 6 ಹಾಗೂ ಬಿಜೆಪಿಯಿಂದ 3 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್, ಬಿ.ಎಸ್.ಶಿವಣ್ಣ, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ.ಮೋಹನ್, ವಿನಯ್ ಕಾರ್ತಿಕ್ ಹಾಗೂ ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೋವಿಂದರಾಜು ಸೋಲನ್ನು ಅನುಭವಿಸಿದ್ದಾರೆ.ಕಣದಲ್ಲಿದ್ದ ಒಟ್ಟು ಎಂಟು ಅಭ್ಯರ್ಥಿಗಳ ಪೈಕಿ ಏಳು ಅಭ್ಯರ್ಥಿಗಳು ಜಯ ಸಾಧಿಸಿದ್ದು, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಐದೂ ಅಭ್ಯರ್ಥಿಗಳು ಸುಲಭವಾಗಿ ಗೆದ್ದು ಬೀಗಿದ್ದಾರೆ.
ಇತ್ತ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಿಂದ ಕಣಕ್ಕಿಳಿದಿದ್ದ 3 ಅಭ್ಯರ್ಥಿಗಳಲ್ಲಿ ಇಬ್ಬರು ಮಾತ್ರ ವಿಜಯಶಾಲಿಯಾಗಿದ್ದು, ಕಾಂಗ್ರೆಸ್ನ ಐದನೇ ಅಭ್ಯರ್ಥಿಯಾಗಿದ್ದ ವಿನಯ್ ಕಾರ್ತಿಕ್ ಎದುರು ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು ಮತಗಳ ಕೊರತೆಯಿಂದ ಸೋಲನ್ನು ಕಂಡಿದ್ದಾರೆ. ಈ ಸೋಲಿನ ಮೂಲಕ ಜಂಟಿಯಾಗಿ ಅಖಾಡಕ್ಕಿಳಿದಿದ್ದ ಮೈತ್ರಿಕೂಟಕ್ಕೆ ಮುಖಭಂಗವಾಗಿದೆ.
ಗುರುವಾರ ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ಮತದಾನ ನಡೆತ್ತು. ಚುನಾವಣೆಯಲ್ಲಿ ಅಡ್ಡಮತದಾನ ಆಗುವ ಭೀತಿ ಎದುರಾಗಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಿತ್ತು.
ಯಾವ್ಯಾವ ಅಭ್ಯರ್ಥಿಗೆ ಎಷ್ಟು ಮತ? :
► ಕಾಂಗ್ರೆಸ್
1. ಬಿ.ಕೆ.ಹರಿಪ್ರಸಾದ್ 30
2. ಪಿ.ವಿ.ಮೋಹನ್ – 29
3. ಬಿಎಸ್ ಶಿವಣ್ಣ- 30
4. ತಿಪ್ಪಣಪ್ಪ ಕಮಕನೂರ- 30
5. ವಿನಯ್ ಕಾರ್ತಿಕ್- 32
► ಬಿಜೆಪಿ
1. ರಘು ಕೌಟಿಲ್ಯ- 29
2. ಲಿಂಗರಾಜ ಪಾಟೀಲ್ 27
► ಜೆಡಿಎಸ್
1. ಗೋವಿಂದರಾಜು-14





