ಉಸ್ತುವಾರಿ ಸಚಿವರ ವೈಫಲ್ಯ ಮರೆಮಾಚಲು ಶಾಸಕರ ವಿರುದ್ಧ ಕಾಂಚನ್ ಹತಾಶ ಟೀಕೆ: ಬಾಲಕೃಷ್ಣ ಶೆಟ್ಟಿ
ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ನೀರು ಸೋರುತ್ತಿರುವ ಬಗ್ಗೆ ತಮ್ಮದೇ ಪಕ್ಷದ ರಾಜ್ಯ ಸರ್ಕಾರ ಹಾಗೂ ಅತಿಥಿಯಾಗಿ ಜಿಲ್ಲೆಗೆ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯವನ್ನು ಮರೆಮಾಚಲು ಉಡುಪಿ ಶಾಸಕರ ವಿರುದ್ಧ ಹತಾಶರಾಗಿ ರಾಜಕೀಯ ಪ್ರೇರಿತ ಟೀಕೆಗೆ ಪ್ರಸಾದ್ ರಾಜ್ ಕಾಂಚನ್ ಮುಂದಾಗಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ವ್ಯಂಗ್ಯವಾಡಿದ್ದಾರೆ.
ಉಡುಪಿ ಬಸ್ ನಿಲ್ದಾಣ ಸೋರುತ್ತಿರುವುದು ರಾಜ್ಯ ಸರ್ಕಾರದ ಆರ್ಥಿಕ ದಿವಾಳಿಗೆ ಕೈಗನ್ನಡಿಯಾಗಿದ್ದು, ರಾಜ್ಯ ಸರಕಾರ ನಿರಂತರವಾಗಿ ಉಡುಪಿ ಜಿಲ್ಲೆಯನ್ನು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿದ್ದರೂ ಚಕಾರ ಎತ್ತದ ಪ್ರಸಾದ್ ಕಾಂಚನ್ ಇದೀಗ ಬಸ್ ನಿಲ್ದಾಣದ ವಿಚಾರ ಚಿಲ್ಲರೆ ರಾಜಕಾರಣ ಮಾಡಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ.
ಉಡುಪಿಯ ಪ್ರಜ್ಞಾವಂತ ಜನತೆ ಪ್ರಸಾದ್ ಕಾಂಚನ್ ರಂತಹ ಅನನುಭವಿ, ಕಾಂಗ್ರೆಸ್ ಪಕ್ಷದಲ್ಲಿಯೇ ಮೂಲೆಗುಂಪಾಗಿರುವ ಪ್ರಸಾದ್ ಕಾಂಚನ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದೇ ರೀತಿ ಪ್ರಸಾದ್ ಕಾಂಚನ್ ತನ್ನ ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಹೇಳಿಕೆ ಮುಂಬರುವ ದಿನಗಳಲ್ಲಿ ಅವರಿಗೆ ಮುಳುವಾಗಲಿದೆ ಎಂದು ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





