ರಾಮ ಮಂದಿರ ಗರ್ಭಗುಡಿಯಲ್ಲಿ ನೀರು ಸೋರುತ್ತಿಲ್ಲ, ಎಲೆಕ್ಟ್ರಿಕ್ ವೈರ್‌ಗಳಿಂದ ನೀರು ಇಳಿಯುತ್ತಿದೆ: ನಿರ್ಮಾಣ ಸಮಿತಿ ಸ್ಪಷ್ಟನೆ

ಅಯೋಧ್ಯೆ: ಇತ್ತೀಚೆಗಷ್ಟೇ ಉದ್ಘಾಟನೆಯಾದ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ ಎಂಬ ದೇವಾಲಯದ ಮುಖ್ಯ ಅರ್ಚಕರ ಆರೋಪವನ್ನು ರಾಮಮಂದಿರ ನಿರ್ಮಾಣದ ಸಮಿತಿ ತಳ್ಳಿ ಹಾಕಿದ್ದು, ಇದು ಎಲೆಕ್ಟ್ರಿಕ್ ವೈರ್ ಗಳಿಂದ ನೀರು ಇಳಿಯುತ್ತಿದೆ ಎಂದು ಸ್ಪಷ್ಟಪಡಿಸಿದೆ.

ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಗರ್ಭಗುಡಿಯಿಂದ ಮಳೆ ನೀರು ಹರಿದು ಹೋಗುತ್ತಿರುವ ಕುರಿತು ದೇವಾಲಯದ ಮುಖ್ಯ ಅರ್ಚಕರ ಆರೋಪವನ್ನು ಮಂಗಳವಾರ ತಳ್ಳಿಹಾಕಿದ್ದು, ನೀರಿನ ಸೋರಿಕೆ ಇಲ್ಲ.

ಆದರೆ ವಿದ್ಯುತ್ ವೈರ್ ಗಳನ್ನು ಅಳವಡಿಸಲು ಜೋಡಿಸಲಾದ ಪೈಪ್‌ಗಳಿಂದ ಮಳೆ ನೀರು ಕೆಳಗೆ ಬಂದಿದೆ. ನಾನೇ ದೇವಸ್ಥಾನದ ಕಟ್ಟಡವನ್ನು ಪರಿಶೀಲಿಸಿದ್ದೇನೆ. 2ನೇ ಮಹಡಿ ನಿರ್ಮಾಣ ಹಂತದಲ್ಲಿದೆ. ಎರಡನೇ ಮಹಡಿಯ ಮೇಲ್ಛಾವಣಿ ಯನ್ನು ಅಂತಿಮವಾಗಿ ನಿರ್ಮಿಸಿದಾಗ, ಮಳೆ ನೀರು ದೇವಾಲಯಕ್ಕೆ ಪ್ರವೇಶಿಸುವುದು ನಿಲ್ಲುತ್ತದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಡಿಸೆಂಬರ್ ವೇಳೆಗೆ ಮಂದಿರ ನಿರ್ಮಾಣ ಪೂರ್ಣ

ಮೇಲ್ಛಾವಣಿಯ ಮೇಲೆ ತಾತ್ಕಾಲಿಕ ವ್ಯವಸ್ಥೆ ನಿರ್ಮಾಣ ಮಾಡುವ ಮೂಲಕ ನೀರು ಮತ್ತು ಸೂರ್ಯನ ಬೆಳಕಿನಿಂದ ಭಕ್ತರನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ಮಹಡಿಯ ಕಾಮಗಾರಿ ನಡೆಯುತ್ತಿದ್ದು, ಈ ವರ್ಷ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ. ಡಿಸೆಂಬರ್ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಮಿಶ್ರಾ ಭರವಸೆ ನೀಡಿದರು.

ಮಂದಿರ ನಿರ್ಮಾಣದಲ್ಲಿ ನಿರ್ಲಕ್ಷ್ಯ

ಇನ್ನು ರಾಮಮಂದಿರ ನಿರ್ಮಾಣದಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿರುವ ರಾಮಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಶನಿವಾರ ಮಧ್ಯರಾತ್ರಿ ಮಳೆ ನೀರು ಸೋರಿಕೆ ಬಳಿಕ ದೇವಾಲಯದ ಆವರಣದಿಂದ ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದ್ದರು. ಅಲ್ಲದೆ ದೇವಾಲಯದ ಅಧಿಕಾರಿಗಳು ಇದನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಶನಿವಾರ ಮಧ್ಯರಾತ್ರಿ ಅಯೋಧ್ಯೆಯಲ್ಲಿ ಸಂಭವಿಸಿದ ಮೊದಲ ಭಾರಿ ಮಳೆಯಲ್ಲಿ ದೇವಾಲಯದ ಗರ್ಭಗುಡಿಯ ಮೇಲ್ಛಾವಣಿಯಿಂದ ಭಾರೀ ಮಳೆ ನೀರು ಸೋರಿಕೆಯಾಗುತ್ತಿದೆ. ರಾಮ್ ಲಲ್ಲಾನ ವಿಗ್ರಹದ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳ ಮತ್ತು ವಿಐಪಿ ‘ದರ್ಶನ’ಕ್ಕೆ ಜನರು ಬರುವ ಸ್ಥಳದ ಮೇಲಿನ ಛಾವಣಿಯಿಂದ ಮಳೆ ನೀರು ಸೋರಿಕೆಯಾಗುತ್ತಿದೆ.

ದೇಶದಾದ್ಯಂತ ಇರುವ ಪ್ರಮುಖ ಮತ್ತು ಖ್ಯಾತ ಇಂಜಿನಿಯರ್‌ಗಳು ರಾಮಮಂದಿರವನ್ನು ನಿರ್ಮಿಸುತ್ತಿದ್ದಾರೆ. ಅವರ ಉಪಸ್ಥಿತಿಯಲ್ಲೇ ಮಳೆ ನೀರು ಸೋರಿಕೆಯಾಗುತ್ತಿರುವುದು ತುಂಬಾ ಆಶ್ಚರ್ಯಕರವಾಗಿದೆ. ಜನವರಿ 22 ರಂದು ದೇವಾಲಯ ಉದ್ಘಾಟನೆಯಾಗಿದೆ.

ಆದರೆ, ಮಳೆ ಬಂದರೆ ಛಾವಣಿ ಸೋರುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ವಿಶ್ವವಿಖ್ಯಾತ ದೇವಾಲಯದ ಮೇಲ್ಛಾವಣಿ ಸೋರುತ್ತಿರುವುದು ಅಚ್ಚರಿ ಮೂಡಿಸಿದೆ. ಇದು ಏಕೆ ಸಂಭವಿಸಿತು?. ಅಂತಹ ದೊಡ್ಡ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ತುಂಬಾ ತಪ್ಪು” ಎಂದು ದಾಸ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!