ನನ್ನ ಜನರಿಗೆ ಈಗಲೂ ದೇವಳಗಳಿಗೆ ಪ್ರವೇಶವಿಲ್ಲ, ನಾನು ಅಯೋಧ್ಯೆಗೆ ಹೋಗಿದ್ದರೆ ಅವರು ಸಹಿಸುತ್ತಿದ್ದರೇ?: ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲ: “ನನ್ನ ಜನರನ್ನು ಇಂದೂ ದೇವಳಗಳಿಗೆ ಪ್ರವೇಶಿಸಲು ಅನುಮತಿಸಲಾಗುತ್ತಿಲ್ಲ. ರಾಮ ಮಂದಿರ ಬಿಡಿ, ಎಲ್ಲಿ ಹೋದರೂ, ಪ್ರವೇಶಕ್ಕಾಗಿ ಹೋರಾಟವಿದೆ. ಗ್ರಾಮಗಳ ಸಣ್ಣ ದೇವಸ್ಥಾನಗಳಲ್ಲಿ ಅನುಮತಿಸುವುದಿಲ್ಲ. ಕುಡಿಯುವ ನೀರು, ಶಿಕ್ಷಣ ಸಂಸ್ಥೆಗಳಲ್ಲೂ ಹೀಗೆಯೇ ಇದೆ, ಕುದುರೆಯಲ್ಲಿ ವರ ಮೆರವಣಿಗೆ ಹೋಗುವುದನ್ನೂ ಸಹಿಸುವುದಿಲ್ಲ, ಅವರನ್ನು ಎಳೆದು ಥಳಿಸಲಾಗುತ್ತಿದೆ. ಮೀಸೆ ಇಟ್ಟರೆ ತೆಗೆಯಲು ಹೇಳಲಾಗುತ್ತದೆ. ಹಾಗಿರುವಾಗ ನಾನು ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗಬೇಕೆಂದು ನಿರೀಕ್ಷಿಸುತ್ತೀರಾ? ನಾನು ಹೋದರೆ ಅವರು ಸಹಿಸುತ್ತಿದ್ದರೇ?” ಎಂದು ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ ಐಡಿಯಾ ಎಕ್ಸ್‌ಚೇಂಜ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪರಿಶಿಷ್ಟರು ದೇಶಾದ್ಯಂತ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಹೇಳಿದ ಅವರು ಬಿಜೆಪಿ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮಾಜಿ ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರು ಪರಿಶಿಷ್ಟರೆಂಬ ಕಾರಣಕ್ಕೆ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿದರು.

“ರಾಷ್ಟ್ರಪತಿಗಳನ್ನು ರಾಮ ಮಂದಿರ ಪ್ರತಿಷ್ಠಾಪನೆ ಮತ್ತು ಸಂಸತ್‌ ನೂತನ ಕಟ್ಟಡ ಉದ್ಘಾಟನೆಗೆ ಆಹ್ವಾನಿಸಲಾಗಿರಲಿಲ್ಲ ಹಾಗೂ ಹಿಂದಿನ ರಾಷ್ಟ್ರಪತಿ ಕೋವಿಂದ್‌ ಅವರನ್ನು ಸಂಸತ್‌ ಕಟ್ಟಡದ ಶಂಕುಸ್ಥಾಪನೆಗೆ ಆಹ್ವಾನಿಸಲಾಗಿರಲಿಲ್ಲ ಎಂದು ಅವರು ಹೇಳಿದರು

ಬಿಜೆಪಿಯ “400 ಪಾರ್” ಘೋಷಣೆಯ ಕುರಿತು ಮಾತನಾಡಿದ ಖರ್ಗೆ, ಮೂರನೇ ಅವಧಿ ಕುರಿತು ಮೋದಿ ಕಾಣುತ್ತಿರುವ ಕನಸು ಈಡೇರದು, ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ನಾಯಕರು ಈಗಾಗಲೇ ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!