ಕುಮಾರಸ್ವಾಮಿ ಸೋಲಿನ ಭಯದಿಂದ ಮಂಡ್ಯಕ್ಕೆ ಬಂದಿದ್ದಾರೆ, ಮೋದಿಯವರ ಅಚ್ಚೆ ದಿನ್ 10 ವರ್ಷ ಕಳೆದರೂ ಭಾರತೀಯರಿಗೆ ಬಂದಿಲ್ಲ:ಸಿದ್ದರಾಮಯ್ಯ

ಮಂಡ್ಯ, ಏ.17: ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಚಿತವಾಗಿ ನುಡಿದರು.

ಮಂಡ್ಯದಲ್ಲಿ ನಡೆದ ಅಭೂತಪೂರ್ವ ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ಅವರು ,ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಶಾಸಕರು. ಅವರು ಅಲ್ಲೇ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತು. ಆದರೆ ಸೋಲಿನ ಭಯದಿಂದ ಇಲ್ಲಿಗೆ ಬಂದು NDA ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಲ್ಲೂ ಖಚಿತವಾಗಿ ಸೋಲಿಸಲು ಮಂಡ್ಯ ಜಿಲ್ಲೆಯ ಜನತೆ ನಿರ್ಧರಿಸಿದ್ದಾರೆ. ಹೀಗಾಗಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಸ್ಪಷ್ಟವಾಗಿ ನುಡಿದರು. ನರೇಂದ್ರ ಮೋದಿಯವರ ಅಚ್ಚೆ ದಿನ್ 10 ವರ್ಷ ಕಳೆದರೂ ಭಾರತೀಯರಿಗೆ ಬಂದಿಲ್ಲ. ರಾಜ್ಯದ ಜನತೆಗೆ ಅಚ್ಚೆ ದಿನ್ ಕಾಣಿಸಿಯೇ ಇಲ್ಲ.

ಮೋದಿಯವರ ಕಾರಣದಿಂದ ಏರಿಕೆಯಾಗಿದ್ದ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ-ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆ ಏರಿಕೆ ನೀತಿಯಿಂದ ಹೈರಾಣಾಗಿದ್ದ ರಾಜ್ಯದ ಜನರ ಬದುಕಿನ‌ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಇದರಿಂದ ರಾಜ್ಯದ ಪ್ರತಿ ಕುಟುಂಬಗಳಿಗೆ, ಪ್ರತಿ ತಿಂಗಳು 5 ರಿಂದ 6 ಸಾವಿರ ರೂಪಾಯಿ ಒದಗಿ ಬರುವಂಥಾ ನೆರವಿನ ಕಾರ್ಯಕ್ರಮಗಳನ್ನು ನೀಡಿದ್ದೇವೆ ಎಂದರು. ರಾಜ್ಯದ ಜನರಿಗೆ ಅನ್ನಭಾಗ್ಯದ ಅಕ್ಕಿ ಕೊಡ ಕೊಡದಂತೆ ಮೋದಿಯವರ ಕೇಂದ್ರ ಸರ್ಕಾರ ತೊಂದರೆ ಕೊಟ್ಟರೂ ಕೂಡ ನಾವು ಅಕ್ಕಿ ಜೊತೆಗೆ ಹಣವನ್ನೂ ನಮ್ಮ ಜನರ ಬದುಕಿಗೆ ಕೊಡುತ್ತಿದ್ದೇವೆ ಎಂದರು.

ಕೊಟ್ಟ ಮಾತಿನಂತೆ ನಡೆದುಕೊಂಡವರು ಯಾರು ಎನ್ನುವುದನ್ನು ನಿಮ್ಮ ಹೃದಯಕ್ಕೆ ಕೇಳಿ ಕೊಳ್ಳಿ. ಅವರಿಗೆ ಮಾತ್ರ ನಿಮ್ಮ ಮತ ನೀಡಿ. ರಾಜ್ಯದಲ್ಲಿ ಬಿಜೆಪಿಯಿಂದ ಗೆದ್ದ 27 ಸಂಸದರು ರಾಜ್ಯದ ಸಮಸ್ಯೆಗಳ ಬಗ್ಗೆ ನೆಪಕ್ಕೂ ಧ್ವನಿ ಎತ್ತದೆ ರಾಜ್ಯದ ಜನರಿಂದ ಪಡೆದ ಮತಕ್ಕೆ ಅವಮಾನ ಮಾಡಿದರು. ಈ ಅವಮಾನಕ್ಕೆ ತಕ್ಕ ಉತ್ತರ ನೀಡಿ ರಾಜ್ಯದ ಜನತೆಯ ಪರವಾಗಿ ಧ್ವನಿ ಎತ್ತುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಮಂಡ್ಯ ಜನತೆಯ ಸ್ವಾಭಿಮಾನಿ ತಾಕತ್ತನ್ನು ತೋರಿಸಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀರಾಮನವಮಿಯ ಶುಭಾಶಯಗಳನ್ನು ಮಂಡ್ಯದ ಜನತೆಗೆ ಮತ್ತು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಅವರು ಕೋರಿ ಎಲ್ಲರೂ ಭಕ್ತಿ ಶ್ರದ್ದೆ ಮತ್ತು ಸಂಭ್ರಮದಿಂದ ರಾಮನವಮಿ ಆಚರಿಸುವಂತೆ ಕೋರಿದರು.ಭಾವನಾತ್ಮಕವಾಗಿ ಕೆರಳಿಸಿ ವಂಚಿಸುವವರಿಗೆ ಮಾನ್ಯತೆ ಕೊಡಬೇಡಿ ಎಂದರು. ಭಾರತೀಯರ ಭಾವನೆಗಳನ್ನು ಭಾವನಾತ್ಮಕವಾಗಿ ಕೆರಳಿಸಿ, ನಮ್ಮ ಬದುಕಿಗೆ ವಂಚಿಸುವವರಿಗೆ ಮಾನ್ಯತೆ ಕೊಡಬೇಡಿ. ಜನರ ಕಷ್ಟಗಳಿಗೆ ಸ್ಪಂದಿಸುವ ನಮಗೆ ಶಕ್ತಿ ಕೊಡಿ. ನೀವು ಕೊಟ್ಟ ಶಕ್ತಿ ನಿಮ್ಮ ಮನೆ ಬಾಗಿಲಿಗೇ ವಾಪಾಸ್ ಉತ್ತಮ ಕಾರ್ಯಕ್ರಮಗಳ ರೂಪದಲ್ಲಿ ವಾಪಾಸ್ ಬರುತ್ತದೆ ಎಂದು ಘೋಷಿಸಿದರು. AICC ವರಿಷ್ಠ ರಾಹುಲ್ ಗಾಂಧಿ, KPCC ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ , ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್ ಸೇರಿ ಮೈಸೂರು, ಮಂಡ್ಯ ಜಿಲ್ಲೆಯ ಶಾಸಕರುಗಳು, ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!