ಪಾಕಿಸ್ತಾನ ಪರ ಘೋಷಣೆ- ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

ಬೆಂಗಳೂರು, ಫೆ 29: ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೈನ್ ಅವರ ವಿಜಯೋತ್ಸವದಲ್ಲಿ “ಪಾಕಿಸ್ತಾನ್‌ ಜಿಂದಾಬಾದ್‌” ಘೋಷಣೆ ಕೂಗಿದ ಘಟನೆ ನಡೆದು ದಿನಗಳೇ ಉರುಳುತ್ತಿದ್ದರೂ ಈವರೆಗೂ ಯಾವುದೇ ಕ್ರಮಕೈಗೊಳ್ಳದೇ ದೇಶದ್ರೋಹಿಗಳ ಬೆಂಬಲಕ್ಕೆ ನಿಂತಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ರವರ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ರಾಜಭವನಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ಅವರು, ಕಾಂಗ್ರೆಸ್ಸಿನವರ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೇಳಿದರೆ ಇದು ಪಾಕಿಸ್ತಾನದಲ್ಲಿ ನಡೆದ ಚುನಾವಣೆಯೋ, ಕರ್ನಾಟಕದಲ್ಲಿ ನಡೆದ ಚುನಾವಣೆಯೋ ಎಂಬ ಬಗ್ಗೆ ಸಂದೇಹವುಂಟಾ ಗುತ್ತಿದೆ. ಇಂತಹವರ ವಿರುದ್ಧ ಕಠಿಣ ಸೆಕ್ಷನ್’ಗಳ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸದೇ ಪೊಲೀಸ್ ಠಾಣೆಯಲ್ಲೇ ಜಾಮೀನು ಸಿಗುವಂತಹ ಸಣ್ಣಪುಟ್ಟ ಸೆಕ್ಷನ್ ಗಳನ್ನು ಹಾಕಲಾಗಿರುವುದು ಅಕ್ಷಮ್ಯವಾಗಿದೆ. ಈ ಮೂಲಕ ಸರ್ಕಾರವೇ ಭಯೋತ್ಪಾದನೆಗೆ ಪರೋಕ್ಷ ಬೆಂಬಲವನ್ನು ಕೊಡುತ್ತಿದೆ. ಇದಕ್ಕೆ ಬಿಜೆಪಿಯು ವಿಧಾನಸೌಧದ ಒಳಗೆ, ಹೊರಗೆ, ಮತ್ತು ಈಗ ರಾಜ್ಯಪಾಲರ ಅಂಗಳಕ್ಕೆ ತೆರಳಿ ತನ್ನ ತೀವ್ರ ಪ್ರತಿರೋಧವನ್ನು ಒಡ್ಡಿದೆ ಎಂದರು.

ದೇಶ-ಭಾಷೆ-ನೆಲದ ಸಂಸ್ಕೃತಿಯ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿಯು ಎಂದಿಗೂ ರಾಜಿಯನ್ನು ಮಾಡಿ ಕೊಳ್ಳುವುದಿಲ್ಲ. ದೇಶಕ್ಕೆ ವಿರುದ್ಧ ನಿಲ್ಲುವವನು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವನು ನಮ್ಮ ವಿರೋಧಿಯೇ. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಕಾಂಗ್ರೆಸ್, ದೇಶದ ಭದ್ರತೆ-ಅಖಂಡತೆಯ ವಿಷಯ ಬಂದಾಗಲೂ ಓಲೈಕೆ ರಾಜಕಾರಣವನ್ನು ಮಾಡಿ ತನಿಖೆಯ ನಾಟಕ ನಡೆಸಿ, ತಪ್ಪಿತಸ್ಥರಿಗೆ ಬಿರಿಯಾನಿ ಕೊಟ್ಟು, ಕೊನೆಗೆ ಕ್ಲೀನ್ ಚಿಟ್ ನೀಡುವ ಸಂಪ್ರದಾಯ ಮುಂದುವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ್ರೋಹಿಗಳು ಪಾಕ್‌ ಪರ ಘೋಷಣೆ ಕೂಗಿರುವುದು ಕಣ್ಣಿಗೆ ರಾಚುವಂತೆ ಈಗಾಗಲೇ ದೃಶ್ಯ ಮಾಧ್ಯಮಗಳಲ್ಲಿ ದೇಶಾದ್ಯಂತ ಬಿತ್ತರವಾಗಿದ್ದರೂ ದೇಶದ್ರೋಹಿಗಳ ಹೆಡೆಮುರಿಕಟ್ಟದೇ ಓಲೈಕೆಗೆ ಮುಂದಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾದ ಈ ಸರ್ಕಾರವನ್ನು ವಜಾಗೊಳಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುತ್ತೇವೆಂದು ಶಾಸಕರು ಹೇಳಿದರು.

Leave a Reply

Your email address will not be published. Required fields are marked *

error: Content is protected !!