ಮೂಲ್ಕಿ: ಅಪಘಾತ ವಲಯ ಸುಧಾರಣೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ
![](https://udupitimes.com/wp-content/uploads/2024/02/IMG-20240216-WA0045-1024x682.jpg)
ಮೂಲ್ಕಿ : ರಾಷ್ಟ್ರೀಯ ಹೆದ್ದಾರಿ-66 ರ ಮಾರಕ 5 ಅಪಘಾತ ವಲಯ ಸುಧಾರಣೆಗೆ, 4 ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ, ಇಂಡಿಯನ್ ರೋಡ್ಸ್ ಕಾಂಗ್ರೆಸ್ ದೆಹಲಿ ಇದರ ಸದಸ್ಯರು, ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರು ಹಾಗೂ ಶಾರದಾ ಇನ್ಫ್ರಾಡಿಸೈನ್ ನ ಆಡಳಿತ ನಿರ್ದೇಶಕರು, ಇಂಜಿನಿಯರ್ ಜೀವನ್ ಕೆ ಶೆಟ್ಟಿ ಮೂಲ್ಕಿ ಇವರು ರಾಷ್ಟ್ರೀಯ ಹೆದ್ದಾರಿಯ ಹಾಗೂ ಕೇಂದ್ರ ಸಾರಿಗೆ ಸಚಿವರಾದ ಸನ್ಮಾನ್ಯ ನಿತಿನ್ ಜೆ ಗಡ್ಕರಿ ಯವರನ್ನು ಅವರ ದೆಹಲಿಯ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
![](https://udupitimes.com/wp-content/uploads/2024/02/IMG-20240216-WA0044-1024x682.jpg)
ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಬಪ್ಪನಾಡು ದೇವಸ್ಥಾನದ ಜಂಕ್ಷನ್ ನಿಂದ, ಕೊಲ್ನಾಡ್ ಜಂಕ್ಷನ್ ವರೆಗೆ 5 ಅಪಘಾತ ವಲಯಗಳು ಇದ್ದು, ಇದುವರೆಗೆ 200 ಕ್ಕೂ ಮಿಕ್ಕಿದ ಅಪಘಾತಗಳು ನಡೆದು 21 ಜನರ ಜೀವ ಬಲಿ ತೆಗುದುಕೊಂಡಿದ್ದು ,ರಸ್ತೆ ಪಕ್ಕದಲ್ಲಿ ಜನರಿಗೆ ಓಡಾಡಲು ಅಸಾಧ್ಯ ವಾಗುವ ರೀತಿಯಲ್ಲಿ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣ ಆಗಿದ್ದು, ಈ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಇಲಾಖೆಗಳು ಮತ್ತು ಸರಕಾರಕ್ಕೆ ಮಾಹಿತಿಯನ್ನು ನೀಡಿದ್ದು ಯಾವುದೇ ರೀತಿಯ ಫಲಕಂಡು ಬಂದಿರುವುದಿಲ್ಲ.
4 ಅಂಡರ್ ಪಾಸ್ ಹಾಗೂ ಶಾಂಬಾವಿ ಸೇತುವೆಯಿಂದ ಕೊಲ್ನಾಡ್ ಜುಂಕ್ಷನ್ ವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಿ ಅಪಘಾತವನ್ನು ತಡೆಹಿಡಿಯುವಂತೆ ಅಗ್ರಹಿಸಿ ಕೇಂದ್ರ ಸರಕಾರದ ಸನ್ಮಾನ್ಯ ಹೆದ್ದಾರಿ ಮತ್ತು ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಜೀವನ್ ಕೆ ಶೆಟ್ಟಿ ಯವರು ಭೇಟಿಯಾಗಿ, ಸವಿವರವಾಗಿ ಮಾನ್ಯ ಸಚಿವರಿಗೆ ವರದಿ ನೀಡಿ ಈ ಬಗ್ಗೆ ಕೂಡಲೇ ಪರಿಹಾರೋಪಾಯ ನೀಡಬೇಕೆಂದು ಒತ್ತಾಯಿಸಲಾಯಿತು.
ಈ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ತನ್ನ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆಯನ್ನು ನೀಡಿದರು ಹಾಗೂ ಕೂಡಲೇ ಸೂಕ್ತ ಕ್ರಮ ಕೈಗೊಳ್ಳೂವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮರಾಠಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಆನಂದ್ ಜಿ ರೇಖಿ, ಡಾ ಸುಶೃತ್ ದೇಶಮುಖ್, ಮೂಲ್ಕಿ ಉದ್ಯಮಿ ನವೀನ್ ಶೆಟ್ಟಿ ಉಪಸ್ಥಿತರಿದ್ದರು. ಜೀವನ್ ಶೆಟ್ಟಿಯವರು ಇತ್ತೀಚೆಗೆ ಗುಜರಾತ್ ನ ಗಾಂಧಿನಗರದಲ್ಲಿ ನಡೆದ ಇಂಡಿಯನ್ ರೋಡ್ಸ್ ಕಾಂಗ್ರೆಸ್ ನ 82 ನೇ ವಾರ್ಷಿಕ ಸಮ್ಮೇಳನದಲ್ಲಿ ಎಸ್ ಕೆ. ನಿರ್ಮಲ್ (ಸೆಕ್ರೆಟರಿ ಜನರಲ್, ಇಂಡಿಯನ್ ರೋಡ್ ಕಾಂಗ್ರೆಸ್, ದೆಹಲಿ) ಇವರಿಗೆ ವಿಷಯವನ್ನು ಪ್ರಸ್ತಾಪಿಸಿ, ಮನವಿ ಸಲ್ಲಿಸಿದ್ದರು.