ಮಣಿಪಾಲ ಮ್ಯಾರಥಾನ್: ನಂಜುಂಡಪ್ಪ-ಚೈತ್ರಾ ದೇವಾಡಿಗ ಚಾಂಪಿಯನ್
![](https://udupitimes.com/wp-content/uploads/2024/02/manipal-marathon-1024x500.webp)
ಮಣಿಪಾಲ, ಫೆ.12: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ವತಿಯಿಂದ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ರವಿವಾರ ಮಣಿಪಾಲದಲ್ಲಿ ನಡೆದ ಪ್ರತಿಷ್ಠಿತ ಮಣಿಪಾಲ ಮ್ಯಾರಥಾನ್ನ ಆರನೇ ಆವೃತ್ತಿಯಲ್ಲಿ ನಂಜುಂಡಪ್ಪ ಹಾಗೂ ಚೈತ್ರಾ ದೇವಾಡಿಗ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
![](https://udupitimes.com/wp-content/uploads/2024/02/IMG-20240211-WA0095-1024x682.jpg)
ಪುರುಷರ ವಿಭಾಗದ 42ಕಿ.ಮೀ. ದೂರದ ಓಟವನ್ನು ನಂಜುಂಡಪ್ಪ 02:47:18 ನಿಮಿಷದಲ್ಲಿ ಕ್ರಮಿಸಿ ಪ್ರಥಮ ಬಹುಮಾನದೊಂದಿಗೆ 50ಸಾವಿರ ರೂ. ನಗದು ತನ್ನದಾಗಿಸಿಕೊಂಡರು. ಸಚಿನ್ ಪೂಜಾರಿ 02:47:18 ನಿಮಿಷದಲ್ಲಿ ತಲುಪುವ ಮೂಲಕ ದ್ವಿತೀಯ ಮತ್ತು ಚೇತ್ರಮ್ ಕುಮಾರ್ 02:52:24 ನಿಮಿಷದಲ್ಲಿ ಕ್ರಮಿಸಿ ತೃತೀಯ ಬಹುಮಾನ ಗೆದ್ದುಕೊಂಡರು.
![](https://udupitimes.com/wp-content/uploads/2024/02/IMG-20240211-WA0097-1024x682.jpg)
ಮಹಿಳೆಯರ ವಿಭಾಗದಲ್ಲಿ ಚೈತ್ರಾ ದೇವಾಡಿಗ 03:26:29 ನಿಮಿಷದಲ್ಲಿ ತಲುಪುವ ಮೂಲಕ ಪ್ರಥಮ ಸ್ಥಾನದೊಂದಿಗೆ 50ಸಾವಿರ ರೂ. ನಗದು ಬಹುಮಾನ ಗಳಿಸಿದರು. ಜಸ್ಮಿತಾ ಕೊಡೆಂಕಿರಿ 04:46:10 ನಿಮಿಷದಲ್ಲಿ ಕ್ರಮಿಸುವ ಮೂಲಕ ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡರು.
![](https://udupitimes.com/wp-content/uploads/2024/02/IMG-20240211-WA0099-1024x682.jpg)
21ಕಿ.ಮೀ. ಪುರುಷರ ವಿಭಾಗ: ಪ್ರ-ವೈಭವ್ ಪಾಟೀಲ್ , ದ್ವಿ- ರಘುವರಣ್, ತೃ- ಮೋನು ಸಿಂಗ್. ಮಹಿಳೆಯರ ವಿಭಾಗ: ಪ್ರ-ಅರ್ಚನಾ, ದ್ವಿ-ನಂದಿನಿ ಜಿ., ತೃ- ಸ್ಪಂದನಾ. 10ಕಿ.ಮೀ. ಪುರುಷರ ವಿಭಾಗ: ಪ್ರ- ಮಣಿಕಂಠ ಪಿ., ದ್ವಿ- ಶ್ರೀ, ತೃ- ಗೂರಾ ಚೌಹಣ್. ಮಹಿಳೆಯರ ವಿಭಾಗ: ಪ್ರ- ರೂಪಾಶ್ರೀ ಎನ್.ಎಸ್., ದ್ವಿ- ರೇಖಾ ಬಸಪ್ಪ ಪಿರೋಜಿ, ತೃ- ಅನ್ನ ಚಾಂಪ್ಸ್. 5 ಕಿ.ಮೀ. ಪುರುಷರ ವಿಭಾಗ: ಪ್ರ- ನಾಗರಾಜ್ ದಿವಟೆ, ದ್ವಿ- ರಾಹುಲ್, ತೃ- ವಿಲಾಸ್ ಪುರಾಣಿಕ್. ಮಹಿಳೆಯ ವಿಭಾಗ: ಪ್ರ- ಉಷಾ ಆರ್., ದ್ವಿ- ಪ್ರಣಮ್ಯ, ತೃ-ಮಾನ್ಯ ಕೆ.ಎಂ.
![](https://udupitimes.com/wp-content/uploads/2024/02/IMG-20240211-WA0104-1024x682.jpg)
ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಉಪಶಾಮಕ ಆರೈಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾದ ಈ ಮ್ಯಾರಥಾನ್ನಲ್ಲಿ ದೇಶ ವಿದೇಶಗಳ 15,000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಮಣಿಪಾಲ ಮ್ಯಾರಥಾನ್ ವಿಕಲಾಂಗ ವ್ಯಕ್ತಿಗಳಿಗೆ ಪ್ರತ್ಯೇಕವಾಗಿ 3ಕಿ.ಮೀ. ಓಟವನ್ನು ಆಯೋಜಿಸಲಾಗಿತ್ತು.
![](https://udupitimes.com/wp-content/uploads/2024/02/IMG-20240211-WA0105-1024x683.jpg)
ಮ್ಯಾರಥಾನ್ಗೆ ಚಾಲನೆ: 42ಕಿ.ಮೀ. ದೂರದ ಮ್ಯಾರಥಾನ್ಗೆ ಐಸಿಐಸಿಐ ಬ್ಯಾಂಕಿನ ಕರ್ನಾಟಕ ರಾಜ್ಯ ಮುಖ್ಯಸ್ಥ ಅತುಲ್ ಜೈನ್ ಅವರು, ಮಾಹೆಯ ಸಹ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕೆಂಪರಾಜು ಜೊತೆಯಾಗಿ ಮತ್ತು 21 ಕಿ.ಮೀ. ಮತ್ತು 10 ಕಿ.ಮೀ. ಓಟಕ್ಕೆ ಎಸ್ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಕ್ರಿಶನ್ ಶರ್ಮಾ, ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಜೊತೆಯಾಗಿ ಚಾಲನೆ ನೀಡಿದರು.
![](https://udupitimes.com/wp-content/uploads/2024/02/IMG-20240211-WA0110-1024x683.jpg)
ಉಪ ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ಸಾಮಗ ಮತ್ತು ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಬಿ.ರಾಜ ಗೋಪಾಲ್ ಐದು ಕಿ.ಮೀ. ಓಟಕ್ಕೆ ಹಾಗೂ ಮುಂಬೈನ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಉಪ ವ್ಯವಸ್ಥಾಪಕ ನಿರ್ದೇಶಕ ರವೀಂದರ್ ರೈ 3ಕಿ.ಮೀ. ದೂರದ ಓಟಕ್ಕೆ ಚಾಲನೆ ನೀಡಿದರು. ಫೆಡರಲ್ ಬ್ಯಾಂಕಿನ ಉಪಾಧ್ಯಕ್ಷ ರಾಜೀವ್ ವಿ.ಸಿ. ಉಪಸ್ಥಿತರಿದ್ದರು.
![](https://udupitimes.com/wp-content/uploads/2024/02/IMG-20240211-WA0096-1024x682.jpg)
ಮಣಿಪಾಲ ಕೆಎಂಸಿ ಗ್ರೀನ್ಸ್ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಹೆ ಪ್ರೊ ವೈಸ್ ಚಾನ್ಸಲರ್ಗಳಾದ ಡಾ.ಶರತ್ ಕೆ.ರಾವ್, ಡಾ.ಎನ್.ಎನ್.ಶರ್ಮಾ, ಡಾ.ನಾರಾಯಣ ಸಭಾಹಿತ್, ಡಾ.ದಿಲೀಪ್ ಜಿ.ನಾಯಕ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ, ಡಾ.ನವೀನ್ ಸಾಲಿನ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಬಹುಮಾನಗಳನ್ನು ವಿತರಿಸಿದರು.
![](https://udupitimes.com/wp-content/uploads/2024/02/IMG-20240211-WA0109-1024x682.jpg)
ಮಾಹೆಯ ಕ್ರೀಡಾ ಮಂಡಳಿಯ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ವಂದಿಸಿದರು. ಕೋಮಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
Worst marathon for ever bcz he don’t know how to conduct a marathon,, and also rules and regulations, he gives a price money to only top 3 winners in all category even he is also winner a age category,