‘ಜನರನ್ನು ಮೂರ್ಖರನ್ನಾಗಿಸುವುದು ಸಿಎಂ ಸ್ಥಾನಕ್ಕೆ, ನಿಮಗೆ ಶೋಭೆ ತರಲ್ಲ’: ಪ್ರಹ್ಲಾದ್ ಜೋಶಿ

ಬೆಂಗಳೂರು, ಜ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ರಾಜಕೀಯ ಮಾಡಬೇಕು ನಿಜ, ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಅದೂ ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜೋಶಿ, ಗಣರಾಜ್ಯೋತ್ಸವಕ್ಕೆ ಕರುನಾಡಿನ ಸ್ತಬ್ಧಚಿತ್ರ ಆಯ್ಕೆ ಆಗದಿರುವುದನ್ನೇ ಮುಂದಿಟ್ಟುಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ.ಸಿದ್ದರಾಮಯ್ಯನವರೇ ರಾಜಕೀಯ ಮಾಡಬೇಕು ನಿಜ. ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ, ನಿಮ್ಮ ಸ್ಥಾನಕ್ಕಾಗಲಿ ಶೋಭೆ ತರದು ಎಂದಿದ್ದಾರೆ.

2015 ರಿಂದ 2023 ರವರೆಗೆ ಕರ್ನಾಟಕ ಪ್ರತಿ ವರ್ಷ ಗಣರಾಜ್ಯೋತ್ಸವ ವೇಳೆ ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ. ಅದನ್ನರಿತು ರಾಜಕಾರಣ ಮಾಡಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಈವರೆಗೆ ಕರ್ನಾಟಕಕ್ಕೆ ಸ್ತಬ್ಧಚಿತ್ರ ಪ್ರದರ್ಶಿಸಲು ಬರೋಬ್ಬರಿ 14 ಅವಕಾಶಗಳಿದ್ದವು. ಅಂದರೆ ಕೇಂದ್ರದಲ್ಲಿ ಬಿಜೆಪಿ (BJP) ಇದ್ದಾಗಲೇ 10 ಬಾರಿ ಕರುನಾಡಿನ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಸಿಎಂ ಇದನ್ನು ಮರೆತಂತೆ ಇದೆ ಎಂದರು.ಇನ್ನು 2007, 2009 ಹಾಗೂ 2010 ರಲ್ಲಿ ಕರ್ನಾಟಕಕ್ಕೆ ಸ್ತಬ್ಧಚಿತ್ರ ಪ್ರದರ್ಶಿಸಲು ಅವಕಾಶ ಸಿಗಲಿಲ್ಲವಲ್ಲ. ಆಗ ಎಲ್ಲಿ ಹೋಗಿತ್ತು ನಿಮ್ಮ ನಾಡಪ್ರೇಮ? ಆಗ ಏಕೆ ಪ್ರಶ್ನಿಸಲಿಲ್ಲ? ಆ ಅವಧಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕರ್ನಾಟಕಕ್ಕೆ ಅವಮಾನ ಆಗಿರಲಿಲ್ಲವೇ? ಎಂದು ಸಚಿವ ಜೋಶಿ ಅವರು ಪ್ರಶ್ನಿಸಿದ್ದಾರೆ.

ಅಲ್ಲದೆ ಆಗಿಲ್ಲದ ಅವಮಾನ ಪದ ಈಗೇಕೆ? ಎಂಬುದು ಜನರಿಗೆ ಅರ್ಥವಾಗುತ್ತದೆ. ಜನರೇನು ಮೂರ್ಖರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡುವುದು ನಮ್ಮ ಕೈಯಲಿಲ್ಲ. ಎಲ್ಲವೂ ನ್ಯಾಯ ಬದ್ಧವಾಗಿಯೇ ನಡೆದಿದೆ. ಆಯ್ಕೆಗಾಗಿ ಆಯಾ ಕ್ಷೇತ್ರದ ಹೆಸರಾಂತ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ ಆಯ್ಕೆ ನಡೆದಿದೆ. ಸಂಸ್ಕ್ರತಿ, ಕಲೆ, ದೇಶ- ರಾಜ್ಯದ ಗೌರವ ಬಿಂಬಿಸುವ, ಸಾದರಪಡಿಸುವ ವಿಷಯದಲ್ಲಿ ಬಿಜೆಪಿ ಎಂದೂ ರಾಜಕಾರಣ ಮಾಡುವುದಿಲ್ಲ. ಅದೇನಿದ್ದರೂ ಕಾಂಗ್ರೆಸ್ ನ ಚಾಳಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!