ಪಡುಬೆಳ್ಳೆ ಶ್ರೀ ನಾರಾಯಣಗುರು ಶಾಲಾ ರಜತ ಸಂಭ್ರಮಕ್ಕೆ ಚಾಲನೆ
ಶಿರ್ವ: ಮುಂಬೈ ಬಿಲ್ಲವರ ಅಸೋಸಿಯೇಶನ್ ಆಡಳಿತಕ್ಕೆ ಒಳಪಟ್ಟ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಎರಡು ದಿನಗಳ ರಜತ ಸಂಭ್ರಮ ಕಾರ್ಯಕ್ರಮಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಪಡುಬೆಳ್ಳೆಯ ಉದ್ಯಮಿ ರಾಮಚಂದ್ರ ನಾಯಕ್ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಸಮಾಜ ಸೇವಾ ಸಂಘ ಪಳ್ಳಿ ನಿಂಜೂರು ಅಧ್ಯಕ್ಷ ಆನಂದ ಎಸ್.ಪೂಜಾರಿ, ಶಾಲಾ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಸಭಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ಬೆಳ್ಳೆ ಶಿವಾಜಿ ಎಸ್.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮಾಧ್ಯಮ ಪ್ರೌಢ ಶಾಲಾ ಹಸ್ತಪತ್ರಿಕೆ ವನಸುಮವನ್ನು ಶಾಲಾ ಆಡಳಿತ ಮಂಡಳಿ ಸದಸ್ಯ ಕಟಪಾಡಿ ಶಂಕರ ಪೂಜಾರಿ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ಳೆ ಗ್ರಾಪಂ ಅಧ್ಯಕ್ಷೆ ದಿವ್ಯಾ ಆಚಾರ್ಯ, ಶಾಲಾ ಸಂಚಾಲಕ ಹರೀಶ್ ಜಿ. ಸಾಲಿಯಾನ್, ಆಡಳಿತ ಮಂಡಳಿಯ ಸದಸ್ಯರಾದ ಶರತ್ ಪೂಜಾರಿ, ಗೀತಾ ವಾಗ್ಲೆ ಬಂಟಕಲ್ಲು, ಪ್ರಕಾಶ್ ಪಾಲಮೆ, ಜಯ ಕುಮಾರ್, ಶಿಕ್ಷಣ ಸಂಯೋಜಕಿ ಪರಿಮಳ, ಉಭಯ ಶಾಲೆಗಳ ವಿದ್ಯಾರ್ಥಿ ನಾಯಕರಾದ ನಿತಿನ್ ದೇವಾಡಿಗ, ನಿಮಿತ್, ಪಿ.ಟಿ.ಎ. ಅಧ್ಯಕ್ಷ ನಾರಾಯಣ ಪೂಜಾರಿ ಮೊದಲಾದವರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಉಭಯ ಮಾಧ್ಯಮ ಶಾಲಾ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಕ್ರೀಡಾ ಸಹಿತ ವಿವಿಧ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಆಡಳಿತಾಧಿಕಾರಿ ಜಿನರಾಜ್ ಸಿ.ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್ ವರದಿ ವಾಚಿಸಿದರು. ಶಿಕ್ಷಕಿ ವೀಣಾ ನಾಯಕ್ ವಂದಿಸಿದರು. ಶಿಕ್ಷಕಿ ನೀತಾ ನಿರೂಪಿಸಿದರು.