ಪಕ್ಷದ ವರಿಷ್ಠರು ಕಳ್ಳರ ಕೈಗೆ ಚಾವಿ ಕೊಟ್ಟಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್
![](https://udupitimes.com/wp-content/uploads/2023/12/yatnal.jpeg)
ವಿಜಯಪುರ: ಪಕ್ಷದ ವರಿಷ್ಠರು ಕಳ್ಳರ ಕೈಗೆ ಚಾವಿ ಕೊಟ್ಟಿದ್ದಾರೆ. ಲೋಕಸಭೆಯಲ್ಲಿ 28 ಸ್ಥಾನ ಬರಲಿಲ್ಲ ಎಂದರೆ ಚಾವಿ ಕಸಿದುಕೊಳ್ಳುತ್ತಾರೆ. 2024ರ ಲೋಕಸಭಾ ಚುನಾವಣೆ ಬಳಿಕ ಪಕ್ಷದ ರಾಜ್ಯ ಘಟಕಕ್ಕೆ ಮೇಜರ್ ಸರ್ಜರಿ ಆಗದಿದ್ದರೆ, ಮುಂದಿನ ನಿರ್ಣಯ ನಾನು ಕೈಗೊಳ್ಳುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.
ರಾಜ್ಯ ಬಿಜೆಪಿ ಘಟಕದ ಪದಾಧಿಕಾರಿಗಳ ಆಯ್ಕೆ ಕುರಿತು ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದಾಧಿಕಾರಿಗಳ ಆಯ್ಕೆ ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ನನ್ನ ಗಮನಕ್ಕೆ ಬರುತ್ತದೆ. ನಾವೇನು ಬಿಜೆಪಿ ಕಾರ್ಯಕರ್ತರಾ?. ನಾವು ದೇಶದ ಕಾರ್ಯಕರ್ತರು ಅಷ್ಟೇ. ನಿಷ್ಠಾವಂತ ಬಿಜೆಪಿಯವರಿಗೆ ಅಷ್ಟೇ ಪದಾಧಿಕಾರಿ ಮಾಡಿದ್ದಾರೆ. ಅವರೆಲ್ಲ ನಿಷ್ಠಾವಂತರು ಎಂದು ವ್ಯಂಗ್ಯವಾಡಿದರು.
ಈಗ ಬಿಜೆಪಿ ಪಕ್ಷವೂ ಕೆಜಿಪಿ- 2ಆಗಿದ್ದು, ಮುಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಮ್ಮಗ ಬಂದರೆ ಕೆಜಿಪಿ-3 ಪಕ್ಷ ಆಗಿಯೂ ಬದಲಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧಪಕ್ಷದ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಮೊಸರು ಕೊಟ್ಟು ನಮಗೆ ಮಜ್ಜಿಗೆ ನೀಡಿದ್ದಾರೆ ಎಂದ ಅವರು, ಯಡಿಯೂರಪ್ಪ ಸೂಚಿಸಿದವರಿಗೆ ಸ್ಥಾನ ನೀಡಲಾಗುತ್ತಿದೆ. ಮುಂದೆ ವಿಧಾನ ಪರಿಷತ್ತಿನ ವಿಪಕ್ಷ ಸ್ಥಾನವೂ ಯಡಿಯೂರಪ್ಪ ಹೇಳಿದಂತೆ ಆಯ್ಕೆ ಮಾಡುತ್ತಾರೆ ಎಂದು ಟೀಕಿಸಿದರು.