ಸಂಸ್ಕೃತಿ ಪ್ರಸಾರಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ- ವಿದ್ಯಾಸಾಗರಶ್ರೀ
![](https://udupitimes.com/wp-content/uploads/2023/12/IMG-20231220-WA0153-1024x311.jpg)
ಉಡುಪಿ : ಡಿಸೆಂಬರ್ 7, 2023ರಂದು ಆರಂಭವಾದ ಉಡುಪಿಯ 28 ಶಾಲೆಗಳ ಪ್ರದರ್ಶನಗಳ ಸಮಾರೋಪ ಇಂದು ಸಂಪನ್ನಗೊಂಡಿತು.
![](https://udupitimes.com/wp-content/uploads/2023/12/IMG-20231220-WA0154-1024x423.jpg)
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡು ವಾರಗಳ ಪರ್ಯಂತ ನಡೆದ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ 28 ಶಾಲೆಗಳ ಸುಮಾರು 900 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಈ ಕಲೆ ಮಕ್ಕಳನ್ನು ಸಂಸ್ಕೃತೀ ಸಂಪನ್ನರಾಗಿಸುವಲ್ಲಿ ಮಹತ್ತ್ವದ ಪಾತ್ರ ವಹಿಸಿದೆ. ಯಕ್ಷಶಿಕ್ಷಣ ಟ್ರಸ್ಟ್ ಇದನ್ನು ನಿರಂತರ ಮುಂದುವರಿಸಿಕೊಂಡು ಬರಲಿ ಎಂದು ಆಶೀರ್ವದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಯಶ್ಪಾಲ್ ಸುವರ್ಣರು ಶುದ್ಧ ಸಂಕಲ್ಪದಿಂದ ಆರಂಭಗೊಂಡ ಈ ಮಹಾ ಅಭಿಯಾನವನ್ನು ನಾವೆಲ್ಲ ಸೇರಿ ಬೆಳೆಸೋಣ ಎಂದರು. ವಿದ್ಯಾಂಗ ಉಪನಿರ್ದೇಶಕರಾದ ಕೆ.ಗಣಪತಿಯವರು ಶುಭಾಶಂಸನೆಗೈದರು. ಅಭ್ಯಾಗತರಾಗಿ ಡಾ.ನಿ.ಬೀ. ವಿಜಯ ಬಲ್ಲಾಳ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಯು. ವಿಶ್ವನಾಥ ಶೆಣೈ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್. ವಿ. ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಶಿಕ್ಷಣದ ಗುರುಗಳನ್ನು ,ಪ್ರಸಾಧನ ತಜ್ಞರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು. ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ವಿತರಿಸಲಾಯಿತು.
ನಾಲ್ವರು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಎಚ್.ಎನ್.ಶೃಂಗೇಶ್ವರ ವಂದಿಸಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.