ಪರ್ಕಳ: ಸೌಖ್ಯವನ ಸರ್ಕಲ್ ಉದ್ಘಾಟನೆ

ಉಡುಪಿ: ಪರ್ಕಳ ಹೈಸ್ಕೂಲ್ ಸಮೀಪ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಹಾದು ಹೋಗುವ ತ್ರಿಭುಜ ಮಾರ್ಗದ ಮಧ್ಯದಲ್ಲಿ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠ, ಜಯಲಕ್ಷ್ಮೀ ಸಿಲ್ಕ್ ಉಡುಪಿ ಮತ್ತು ಸೌಖ್ಯವನ ಆಸ್ಪತ್ರೆ ಪರೀಕ ಇವರ ಸಹಯೋಗದೊಂದಿಗೆ ಸ್ಥಳೀಯರ ಸಹಕಾರದೊಂದಿಗೆ ನಿರ್ಮಿಸಲಾದ ‘ ಶ್ರೀಮಂಜುನಾಥ ಸೌಖ್ಯವನ ವೃತ್ತ’ವನ್ನು ಉಡುಪಿ ಶ್ರೀಕೃಷ್ಣ ಮಠದ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಭಾವಿ ಪೀಠಾಧಿಪತಿ ಶ್ರೀಪುತ್ತಿಗೆ ಶ್ರೀಸುಗಣೇಂದ್ರತೀರ್ಥರು ಉದ್ಘಾಟಿಸಿದರು.

ನಂತರ ಅಲ್ಲಿಯೇ ಜರಗಿದ ಸರಳ ಸಮಾರಂಭದಲ್ಲಿ ಆಶೀರ್ವಚನವನ್ನು ನೀಡಿದ ಶ್ರೀ ಪಾದರು ಇದು ಉಡುಪಿ ಮತ್ತು ಪುತ್ತಿಗೆಗೆ ಮೂಲ ಕೊಂಡಿಯಾಗಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ ಸೌಖ್ಯವನ ‘ ಕ್ಕೆ ಬರುವ ಸಾಧಕರಿಗೆ ಗುರುತಿನ ಮೈಲುಗಲ್ಲಾಗಿ ಹೆಸರುವಾಸಿಯಾಗಲಿ ಎಂದು ಹರಸಿ ಮುಂದಿನ ಪರ್ಯಾಯಕ್ಕೆ ಎಲ್ಲರ ಸಹಕಾರವನ್ನು ಬಯಸುತ್ತಾ ಪರ್ಯಾಯದ ಆಮಂತ್ರಣ ಪತ್ರಿಕೆಯನ್ನು ನೀಡಿದರು.

ಈ ಸಂಧರ್ಭದಲ್ಲಿ ಶ್ರೀಗಳನ್ನು ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು. ಗಣೇಶ್ ರಾಜ್ ಸರಳೇಬೆಟ್ಟು ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ‘ಸೌಖ್ಯವನ’ದ ಡಾ. ಗೋಪಾಲ್ ಪೂಜಾರಿ, ಡಾ ಶೋಭಿತ್ ಶೆಟ್ಟಿ, ವ್ಯವಸ್ಥಾಪಕ ಪ್ರವೀಣ್ ಕುಮಾರ್, ಗಣ್ಯರಾದ ಸ್ಥಳೀಯ ಮೋಹನ ದಾಸ್ ನಾಯಕ್, ಸಮಾಜಸೇವಕ ನಿತ್ಯಾನಂದ ಒಳಕಾಡು, ಸರಳೇಬೆಟ್ಟು ಬಾಲ ಮಿತ್ರ ಯಕ್ಷಗಾನ ಮಂಡಳಿಯ ಸಂಚಾಲಕ ಕಮಲಾಕ್ಷಪ್ರಭು, ಪರ್ಕಳದ ಉದ್ಯಮಿ ಅಬೂಬಕ್ಕರ್ ಸಾಹೇಬ್, ಕ.ರ.ವೇ ಉಡುಪಿ ಪದಾಧಿಕಾರಿಗಳಾದ ಪ್ರಭಾಕರ ರಾಜ್ ಪೂಜಾರಿ, ರತ್ನಾಕರ ಮೊಗವೀರ, ಹಾವಂಜೆ, ಕುಶಾಲ್ ಅಮೀನ್ ಬೆಂಗ್ರೆ, ಜಯ ಪೂಜಾರಿ, ಸಿದ್ದಣ್ಣ ಸ್ವಾಮಿ, ಗೋಪಾಲ್ ಮೆಂಡನ್, ಐ,ಓ ಸಿ,ಪೆಟ್ರೋಲ್ ಪಂಪಿನ ಮಾಲಕರಾದ ಉಪೇಂದ್ರ ನಾಯಕ್, ರಾಘವೇಂದ್ರ ನಾಯಕ್, ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ರಾಜೇಶ್ ಪ್ರಭು ಪರ್ಕಳ, ಉಡುಪಿ ಜಯಲಕ್ಷ್ಮಿ ಸಿಲ್ಕ್ ನ ಸಂದೀಪ್ ಸಾಲಿಯಾನ್ ಅಚ್ಚುತ ನಗರ ನವೀನ್ ಕುಮಾರ್ ದೇವಿ ನಗರ, ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!