ವಿಜಯಕುಮಾರ್ ಕೊಡಿಯಾಲ್ ಬೈಲ್‌ರಿಗೆ ರಂಗಚಾವಡಿ ಪ್ರಶಸ್ತಿ

ಸುರತ್ಕಲ್: ರಂಗಚಾವಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ಸುರತ್ಕಲ್ ಇವರ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ, ರಂಗಚಾವಡಿ ಪ್ರಶಸ್ತಿ 2023 ಪ್ರದಾನ ಸಮಾರಂಭ ಡಿಸೆಂಬರ್ 3 ರಂದು ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ.
2023 ರ ಸಾಲಿನ ರಂಗಚಾವಡಿ ಪ್ರಶಸ್ತಿಯನ್ನು ಖ್ಯಾತ ನಾಟಕ ರಚನೆಕಾರ- ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಸ್ವೀಕರಿಸಲಿದ್ದಾರೆ.

ಕಾರ್ಯಕ್ರಮವನ್ನು ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ ಡಾ ಸಂಜೀವ ದಂಡೆಕೇರಿ, ಕಟೀಲು ಶ್ರೀಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಎಂ ಶೆಟ್ಟಿ ಕಟೀಲು, ತೆರಿಗೆ ಹಣಕಾಸು ನಿರ್ಧರಣೆ ಮತ್ತು ಅಫೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ವರುಣ್ ಚೌಟ, ಬಂಟರ ಮಾತೃ ಸಂಘದ ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ, ಮುಂಬೈ ಥಾಣೆ ಬಂಟ್ಸ್ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಚಲನ ಚಿತ್ರ ನಿರ್ಮಾಪಕ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ, ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಮಂಗಳೂರು ಯಥಾಥ್೯ ಸೋಶಿಯಲ್ ನ ಸ್ಥಾಪಕ ಈಶ್ವರ್ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಘಟಕದ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಡಾ.ಸಂಜೀವ ದಂಡೆಕೇರಿ, ವಿ.ಜಿ. ಪಾಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರನ್ನೊಳಗೊಂಡ ಆಯ್ಕೆ ಸಮಿತಿ 2023 ರ ಸಾಲಿನ ರಂಗಚಾವಡಿ ಪ್ರಶಸ್ತಿಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಆಯ್ಕೆ ಮಾಡಿದೆ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಲಾಸಂಗಮ ಮಂಗಳೂರು ತಂಡದಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ಮೈತಿದಿ ನಾಟಕ ಪ್ರದರ್ಶನ ಕಾಣಲಿದೆ ಎಂದು ರಂಗಚಾವಡಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಾಧಕ ಕೊಡಿಯಾಲ್ ಬೈಲ್: ವಿಜಯಕುಮಾರ್ ಕೊಡಿಯಾಲ್ ಬೈಲ್ ಕಳೆದ 4 ದಶಕಗಳಿಗಿಂತಲೂ ಮಿಕ್ಕಿ ರಂಗಭೂಮಿಯಲ್ಲಿ ಕಲಾಸೇವೆ ಮಾಡುತ್ತಾ ಬಂದಿರುವವರು. ಒರಿಯೆ ಮಗೆ, ಒಂಜಿ ನಿಮಿಷ, ಒರಿಯರ್ದೊರಿ ಅಸಲ್, ಒಯಿಕ್ ಲಾ ಆವಂದಿನಕುಲು, ಅಕ್ಲೆಲೆಕ ಎಂಕುಲತ್ತ್, ಮದಿಮೆ, ಕೋಡೆ ಇನಿ ಎಲ್ಲೆ, ವಿದ್ದು, ಸೀತಾ ಟೀಚರ್, ಹೀಗೆ ಉತ್ತಮ ನಾಟಕಗಳನ್ನು ರಚಿಸಿ ನಿರ್ದೇಶಿಸಿ ಗೆದ್ದವರು. ಅಸಲ್ ಮೂರ್ತಿಲು, ಅಸಲ್ ಏರ್ ಮೊದಲಾದ ಮರಾಠಿ ನಾಟಕಗಳನ್ನು ತುಳುವಿಗೆ ತಂದವರು. ಸ್ವಾಮಿ ಶರಣಂ ಅಯ್ಯಪ್ಪ, ಮುಕಾಂಬಿಕೆ, ದೇವುಪೂಂಜ ಮೊದಲಾದ ಚಾರಿತ್ರಿಕ ಮತ್ತು ಭಕ್ತಿ ಪ್ರದಾನ ನಾಟಕಗಳನ್ನು ಮಾಡಿ ಪ್ರೇಕ್ಷಕರ ಮನ ಗೆದ್ದವರು. ಶಿವದೂತ ಗುಳಿಗೆ ನಾಟಕದ ಮೂಲಕ ಚರಿತ್ರೆ ಸೃಷ್ಟಿಸಿದವರು. ಇದೀಗ ಮೈತಿದಿ ಹೊಸ ಪರಿಕಲ್ಪನೆಯ ನಾಟಕ. ಪ್ರತಿಯೊಂದರಲ್ಲೂ ಹೊಸತನ ವಿಭಿನ್ನತೆ ಹುಡುಕುವವರು. ನಾಟಕದ ಜೊತೆಗೆ ಸಿನಿಮಾದಲ್ಲೂ ಯಶಸ್ಸು ಕಂಡವರು. ಬಹಳಷ್ಟು ಕಲಾವಿದರನ್ನು ರಂಗಭೂಮಿ, ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಿದವರು.

ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ರ ಸಾಧನೆಯನ್ನು ಗುರುತಿಸಿ ರಂಗಚಾವಡಿ ಮಂಗಳೂರು ಸಂಸ್ಥೆ ಡಿಸೆಂಬರ್ 3 ರಂದು ಭಾನುವಾರ ಸುರತ್ಕಲ್ ಬಂಟರ ಭವನದಲ್ಲಿ 2023 ರ ಸಾಲಿನ ರಂಗಚಾವಡಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!