ಅರಶಿನಗುಂಡಿ ಜಲಪಾತದಲ್ಲಿ ವಾರದ ಬಳಿಕ ನೀರುಪಾಲದ ಶರತ್ ಮೃತದೇಹ ಪತ್ತೆ
ಉಡುಪಿ: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಜುಲೈ23 ರಂದು ನೀರುಪಾಲಾದ ಶರತ್ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಕೊಲ್ಲೂರಿನ ಅರಶಿನ ಗುಂಡಿ ಜಲಪಾತದಲ್ಲಿ ಶರತ್ ಕಾಲು ಜಾರಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ, ಕೋತಿರಾಜ್ ಹಾಗೂ ಎನ್ಡಿಆರ್ಎಫ್ ತಂಡದಿಂದ ಸತತವಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಅಲ್ಲದೆ ಡ್ರೋಣ್ ಮೂಲಕ ಕೂಡ ಹುಡುಕಾಟ ನಡೆಸಿದ್ದು, ಇಂದು ಶರತ್ ಅವರ ಮೃತದೇಹ ಅರಶಿನ ಗುಂಡಿ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆಯಾಗಿದೆ. ಬಂಡೆ ಕಲ್ಲಿನ ಒಳಗಡೆ ಸಿಲುಕಿ ಹಾಕಿಕೊಂಡ ಸ್ಥಿತಿಯಲ್ಲಿ ಶರತ್ ಮೃತದೇಹ ಪತ್ತೆಯಾಗಿದೆ.
ಭದ್ರಾವತಿಯ ಕೆ.ಎಚ್ ನಗರದಲ್ಲಿರುವ ನಿವಾಸಿಯಾಗಿದ್ದ ಈತ ತನ್ನೂರಿನಲ್ಲಿ ಅಡಕೆ ತಟ್ಟೆ ಫ್ಯಾಕ್ಟರಿ ಇಟ್ಟುಕೊಂಡು ದುಡಿಮೆ ಮಾಡುತ್ತಿದ್ದರು. ಕಳೆದ ಭಾನುವಾರ ಬೆಳಗ್ಗೆ ಶರತ್ ಸ್ನೇಹಿತರೊಂದಿಗೆ ಕಾರಿನಲ್ಲಿ ಭದ್ರಾವತಿಯಿಂದ ಕೊಲ್ಲೂರಿಗೆ ಬಂದ ಶರತ್ ರಾಜ್ಯದ ಅರಶಿನಗುಂಡಿ ಜಲಪಾತದಲ್ಲಿ ಬಂಡೆ ಕಲ್ಲಿನ ಮೇಲೆ ನಿಂತಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಶರತ್ ಕಾಲು ಜಾರಿ ಬೀಳುವ ವಿಡಿಯೋ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿತ್ತು.ಮಾತ್ರವಲ್ಲದೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು.