ವಿದ್ಯಾರ್ಥಿಗಳನ್ನು ಬಲಿಪಶು ಮಾಡುವ ದುಷ್ಟ ರಾಜಕೀಯ ಖಂಡನಾರ್ಹ, ಸುಳ್ಳು ಮತ್ತು ದ್ವೇಷ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮವಾಗಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

ಉಡುಪಿಯ ಕಾಲೇಜೊಂದರಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ರಾಜ್ಯದ ಪ್ರಮುಖ ವಿಪಕ್ಷ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ನೀಡುತ್ತಿರುವ ಹೇಳಿಕೆಗಳು, ಹರಡುತ್ತಿರುವ ದ್ವೇಷ ಮತ್ತು ಸುಳ್ಳುಗಳು ಹಾಗೂ ಈ ಘಟನೆಯ ಬಗ್ಗೆ ಅವರ ಧೋರಣೆ ಅತ್ಯಂತ ಪ್ರಚೋದನಕಾರಿ ಹಾಗೂ ಅಷ್ಟೇ ದುಷ್ಟ ಉದ್ದೇಶದಿಂದ ಕೂಡಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.

ಕಾಲೇಜೊಂದರ ಮೂವರು ವಿದ್ಯಾರ್ಥಿನಿಯರು ಮಾಡಿದ್ದಾರೆ ಎನ್ನಲಾದ ಕೃತ್ಯವು ತೀರಾ ಬೇಜವಾಬ್ದಾರಿಯುತ ಹಾಗೂ ಬಾಲಿಶವಾದುದು. ಆದರೆ ಆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಷ್ಟೇ ಜವಾಬ್ದಾರಿಯುತವಾಗಿ ಹಾಗೂ ವಿವೇಕಯುತವಾಗಿ ಇಡೀ ಪ್ರಕರಣವನ್ನು ನಿಭಾಯಿಸಿದ್ದಾರೆ. ಸಂಬಂಧಿಸಿದ ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಿಸಿದ್ದಾರೆ. ತಮಾಷೆಗಾಗಿ ಆ ವೀಡಿಯೊ ಮಾಡಿದ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿ ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರ ಭವಿಷ್ಯದ ಕುರಿತು ಪ್ರಾಮಾಣಿಕ ಕಳಕಳಿ ಇರುವ ಯಾವುದೇ ಜವಾಬ್ದಾರಿಯುತ ಶೈಕ್ಷಣಿಕ ಸಂಸ್ಥೆ ನಡೆದುಕೊಳ್ಳಬೇಕಾದ ರೀತಿಯಲ್ಲೇ ಆ ಕಾಲೇಜು ನಡೆದುಕೊಂಡಿದೆ.

ಪ್ರಕರಣ ಬೆಳಕಿಗೆ ಬಂದ ಕೂಡಲೇ ಆ ಕುರಿತು ನಿಷ್ಪಕ್ಷ ವಿಚಾರಣೆ ನಡೆಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರ ನೇತೃತ್ವದ ಪೊಲೀಸರು ಎಲ್ಲ ವಾಸ್ತವಾಂಶಗಳನ್ನು ಜನರ ಮುಂದಿಟ್ಟಿದ್ದಾರೆ. ಅಲ್ಲಿ ಯಾವುದೇ ಹಿಡನ್ ಕ್ಯಾಮರಾ ಇರಲಿಲ್ಲ, ಯಾರಿಗೂ ಯಾವುದೇ ರೀತಿಯಲ್ಲಿ ಬ್ಲ್ಯಾಕ್ ಮೇಲ್ ನಡೆದಿಲ್ಲ, ವೀಡಿಯೊ ಆಗಲೇ ಡಿಲೀಟ್ ಮಾಡಲಾಗಿದ್ದು, ಅದು ಅಲ್ಲಿಂದ ಯಾರಿಗೂ ಹೋಗಿಲ್ಲ. ಕೇವಲ ತಮಾಷೆಗಾಗಿ ವಿದ್ಯಾರ್ಥಿನಿಯರು ಮಾಡಿಕೊಂಡಿರುವ ಪ್ರಕರಣ ಇದು. ಹಾಗಾಗಿ ಆ ವಿದ್ಯಾರ್ಥಿನಿ ತನ್ನ ಹಾಗೂ ಸಹಪಾಠಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ದೂರು ದಾಖಲಿಸಿಲ್ಲ ಎಂದು ಮಾನ್ಯ ಉಡುಪಿ ಎಸ್ಪಿಯವರು ಸ್ಪಷ್ಟಪಡಿಸಿದ್ದಾರೆ.

ಆದರೆ ಇಡೀ ಪ್ರಕರಣಕ್ಕೆ ಇಲ್ಲದ ಕೋಮುವಾದಿ ಬಣ್ಣ ಬಳಿದು, ಇಲ್ಲವೇ ಇಲ್ಲದ ಷಡ್ಯಂತ್ರದ ರೂಪ ಕೊಟ್ಟು, ಅದಕ್ಕೆ ಯಾವ್ಯಾವುದೋ ಇಲ್ಲಸಲ್ಲದ ಪ್ರಕರಣಗಳಿಗೆ ಥಳಕು ಹಾಕಿರುವ ಬಿಜೆಪಿ ಶಾಸಕರು, ಆ ಪಕ್ಷದ ರಾಜ್ಯ ಮುಖಂಡರು , ಸಂಘ ಪರಿವಾರದ ನಾಯಕರು ಹಾಗು ಅವರ ಬೆಂಬಲಿಗ ಐಟಿ ಪಡೆ ಹಸಿ ಹಸಿ ಸುಳ್ಳುಗಳನ್ನು ಹರಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಇದು ಉಡುಪಿಯಲ್ಲಿ ಶಾಂತಿ ಸುವ್ಯವಸ್ಥೆ ಹಾಗು ಸೌಹಾರ್ದತೆಯನ್ನು ಹಾಳು ಮಾಡಿ ಜಿಲ್ಲೆಗೆ ಹಾಗು ಇಡೀ ರಾಜ್ಯಕ್ಕೆ ಕೆಟ್ಟ ಹೆಸರು ತರಲು ನಡೆಸುತ್ತಿರುವ ದೊಡ್ಡ ಷಡ್ಯಂತ್ರವಾಗಿದೆ. ಪೋಲೀಸರ ವಿಚಾರಣೆ ಹಾಗು ಕಾಲೇಜು ಆಡಳಿತ ಮಂಡಳಿಯವರ ಪತ್ರಿಕಾಗೋಷ್ಠಿ ಸ್ಪಷ್ಟವಾಗಿ ಎಲ್ಲ ವಿಷಯಗಳನ್ನು ಮುಂದಿಟ್ಟ ಬಳಿಕವೂ ಒಂದು ಸಮುದಾಯದ ವಿರುದ್ಧ ಆಧಾರರಹಿತ ಸುಳ್ಳಾರೋಪ ಮಾಡುತ್ತಿರುವ ಬಿಜೆಪಿ ಹಾಗು ಸಂಘ ಪರಿವಾರದ ಮುಖಂಡರ ವಿರುದ್ಧ ಉಡುಪಿ ಪೊಲೀಸರು ಸಂಬಂಧಪಟ್ಟ ಕಲಂಗಳಡಿ ಪ್ರಕರಣ ದಾಖಲಿಸಬೇಕಾಗಿದೆ. ಹಾಗೆಯೇ ಪ್ರಕರಣದ ಬಗ್ಗೆ ಹಸಿ ಹಸಿ ಸುಳ್ಳುಗಳನ್ನು ಟ್ವೀಟ್ ಮಾಡಿ ರಾಷ್ಟ್ರೀಯ ಮಾಧ್ಯಮಗಳು ಅದೇ ರೀತಿ ವರದಿ ಪ್ರಕಟಿಸಲು ಕಾರಣರಾದ ರಶ್ಮಿ ಸಾಮಂತ್ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗಿದೆ.

ಉಡುಪಿಗೆ ಭೇಟಿ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರೂ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಬೇಡಿ, ಈಗಲೇ ತೀರ್ಪು ಕೊಡಬೇಡಿ, ಸೋಷಿಯಲ್ ಮೀಡಿಯಾಗಳಲ್ಲಿ ವದಂತಿ ಹರಡಬೇಡಿ ಎಂದು ಕರೆ ನೀಡಿರುವುದು ಸ್ವಾಗತಾರ್ಹ. ಅದನ್ನು ಅವರ ಪಕ್ಷದವರೇ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಕಾಲೇಜಿನಲ್ಲಿ ನಡೆದಿರುವ ಪ್ರಕರಣ ಎಲ್ಲ ಪೋಷಕರಿಗೆ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಸೋಷಿಯಲ್ ಮೀಡಿಯಾ ಹಾಗು ರೀಲ್ಸ್ ಗಳಲ್ಲಿ ಮುಳುಗಿರುವ ಯುವಕ – ಯುವತಿಯರು ತಮ್ಮ ಮೈಮರೆವು ಹಾಗು ಮೋಜಿನಲ್ಲಿ ಇಂತಹ ಹತ್ತು ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅವರಿಗೆ ಸೂಕ್ತ ಎಚ್ಚರಿಕೆ ಹಾಗು ಕಾಳಜಿಯ ಕೌನ್ಸೆಲಿಂಗ್ ನ ಅಗತ್ಯವಿದೆ. ಆದರೆ ಅವರು ಬಾಲಿಶತನದಿಂದ ಮಾಡಿರುವ ಬೇಜವಾಬ್ದಾರಿ ಕೃತ್ಯಕ್ಕೆ ಇಲ್ಲದ ಷಡ್ಯಂತ್ರದ ರೂಪ ಕಟ್ಟಿ ಅವರನ್ನು, ಅವರು ಪ್ರತಿನಿಧಿಸುವ ಸಮುದಾಯವನ್ನು ಬಲಿಪಶು ಮಾಡುವ ಹುನ್ನಾರದ ರಾಜಕಾರಣ ಖಂಡಿತ ಸಲ್ಲದು. ಉಡುಪಿಯ ಸರ್ವಧರ್ಮೀಯರು ಇದನ್ನು ಖಂಡಿಸಬೇಕಾಗಿದೆ ಎಂದು ಯಾಸೀನ್ ಮಲ್ಪೆ ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!