ವಿದ್ಯಾರ್ಥಿಗಳ ಸಾಧನೆಯೇ ದಾನಿಗಳಿಗೆ ಪ್ರೇರಣೆ- ಡಾ.ಅಶೋಕ್ ಕಾಮತ್
ಉಡುಪಿ: ವಿದ್ಯಾರ್ಥಿಗಳು ಮಾಡುವ ಗರಿಷ್ಠ ಮಟ್ಟದ ಶೈಕ್ಷಣಿಕ ಸಾಧನೆಗಳಿಂದ ದಾನಿಗಳು ಹೆಚ್ಚು ಹೆಚ್ಚು ಪ್ರೇರಣೆ ಹೊಂದಿ ಅವರ ಶೈಕ್ಷಣಿಕ ಅವಶ್ಯಕತೆ ಗಳಿಗೆ ಸ್ಪಂದನ ನೀಡುವರು ಎಂದು ಶಿಕ್ಷಣ ತಜ್ಞ, ಡಯಟ್ ಉಪ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅಭಿಪ್ರಾಯಪಟ್ಟರು.
ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಒನ್ ಗುಡ್ ಸ್ಟೆಪ್, ಬೆಂಗಳೂರು ಇವರು ಕೊಡ ಮಾಡಿಸಿದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡುತ್ತಿದ್ದರು. ದಾನಿ ಜಿನಿಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿ ನಿರಾಲಿ ವೋರಾ ಸುಮಾರು 3.5 ಲಕ್ಷ ರೂ. ಮೊತ್ತದ ನೋಟ್ ಪುಸ್ತಕಗಳನ್ನು ವಿತರಿಸಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ದಯಾನಂದ್ ವಿದ್ಯಾರ್ಥಿಗಳು ತಾವು ಪಡೆದ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಿದರೆ ದಾನ ಕೊಟ್ಟಿರುವುದಕ್ಕೂ ಪಡೆದಿರುವುದಕ್ಕೂ ಸಾರ್ಥಕತೆ ಉಂಟಾಗುತ್ತದೆ ಎಂದು ಹೇಳಿದರು. ಶಾಲೆಯ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷೆ ತಾರಾದೇವಿ, ನವನೀತ್ ಪಬ್ಲಿಕೇಶನ್ ಬೆಂಗಳೂರು ಇವರಿಂದ ಉತ್ತಮ ಗುಣಮಟ್ಟದ ನೋಟ್ ಪುಸ್ತಕ ಗಳನ್ನು ಪೂರೈಸುವಲ್ಲಿ ಸಹಕರಿಸಿದ ಒನ್ ಗುಡ್ ಸ್ಟೆಪ್ ನ ಅಮಿತಾ ಪೈ ಉಪಸ್ಥಿತರಿದ್ದು ಶುಭಹಾರೈಸಿದರು. ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ಧನ್ಯವಾದಗೈದರು.