ಏ.19 ರಂದು ಸುನಿಲ್ ಕುಮಾರ್ ನಾಮಪತ್ರ- 35 ಸಾವಿರಕ್ಕೂ ಅಧಿಕ ಮಂದಿ ಭಾಗಿ

ಕಾರ್ಕಳ : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಅವರು 19ರಂದು ನಾಮಪತ್ರ ಸಲ್ಲಿಸಲಿದ್ದು ಅಂದು ಪ್ರತಿ ಬೂತ್‌ನಿಂದ ಸುಮಾರು 200 ಮಂದಿಯಂತೆ 35 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ರಾಜ್ಯದಲ್ಲೇ ಮಾದರಿ ಕಾರ್ಯಕ್ರಮವಾಗಲಿದೆ ಎಂದರು.

ಮೇ.10 ರಂದು ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ವತಿಯಿಂದ ಪ್ರತಿ ಗ್ರಾಮಗಳಲ್ಲೂ ಕಾರ್ಯಕರ್ತರ ಸಮಾವೇಶ ಮತ್ತು ಬೂತ್ ಮಟ್ಟದ ಸಭೆಗಳು ನಡೆಯಲಿವೆ. ಕಳೆದ 5 ವರ್ಷಗಳಲ್ಲಿ ಜನರ ಬಳಿ ಬಾರದ ಕಾಂಗ್ರೆಸ್ ಈಗ ಅಪಪ್ರಚಾರದ ಮೂಲಕ ಜನರನ್ನು ತಲುಪುತ್ತಿದೆ. ಕೊರೋನ ಸೋಂಕಿನ ಸಂಕಷ್ಟ ಕಾಲದಲ್ಲಿ ಸುನಿಲ್ ಕುಮಾರ್ ಅವರ ಕಾರ್ಯ ಸ್ಮರಣೀಯ. ತಾಲ್ಲೂಕಿನ ಗ್ರಾಮ ಗ್ರಾಮದಲ್ಲೂ ಅವರ ಅಭಿವೃದ್ಧಿಪರ ಕೆಲಸಗಳು ಮಾತನಾಡುತ್ತಿವೆ. ಕಾರ್ಕಳದಲ್ಲಿ ಬಿಜೆಪಿ ಮಾಡಿದಂತಹ ಜನಪರ ಕೆಲಸ ಕಾರ್ಯಗಳ ಕುರಿತು ಜನತೆಗೆ ತಿಳಿದಿದೆ. ಈ ಬಾರಿಯ ಚುನಾವಣೆಯಲ್ಲೂ ಸುನಿಲ್ ಕುಮಾರ್ ಅವರ ಗೆಲುವಿಗೆ ಕ್ಷೇತ್ರದ ಜನತೆ ಬೆಂಬಲ ನೀಡಲಿದ್ದಾರೆ ಎಂದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ ಪಕ್ಷವನ್ನೇ ಉಸಿರಾಗಿಸಿಕೊಂಡಿದ್ದ ಕಾಂಗ್ರೆಸ್‌ನ ಪ್ರಾಮಾಣಿಕ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವುದು ನಾಚಿಗೇಡಿನ ಸಂಗತಿ. ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಳೆದ 5 ವರ್ಷದಲ್ಲಿ ಜೀವಂತವಾಗಿರಿಸಿದ ಒಬ್ಬ ಪ್ರಾಮಾಣಿಕ ಕಾರ್ಯಕರ್ತನಿಗೆ ನ್ಯಾಯ ನೀಡಲಾಗದ ಕಾಂಗ್ರೆಸ್‌ನಿಂದ ಕ್ಷೇತ್ರದ ಮತದಾರರಿಗೆ ನ್ಯಾಯ ಸಿಗಬಹುದೇ ? ಎಂದು ಪ್ರಶ್ನಿಸಿದರು. ಕಳೆದ ಎರಡು ದಿನಗಳಿಂದ ಜಾತಿ ರಾಜಕೀಯದ ಮಾತು ಕೇಳಿ ಬರುತ್ತಿದ್ದು ಕಾರ್ಕಳದ ಜನ ಜಾತಿ ರಾಜಕೀಯಕ್ಕೆ ಸೊಪ್ಪು ಹಾಕುವುದಿಲ್ಲ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಜಯರಾಮ ಸಾಲ್ಯಾನ್, ಬಿಜೆಪಿ ವಿಸ್ತಾರಕ್ ಪ್ರಜ್ವಲ್ ಇದ್ದರು.

Leave a Reply

Your email address will not be published. Required fields are marked *

error: Content is protected !!