ನಾಳೆ ಪ್ರಧಾನಿ ಮೋದಿ ಮಂಡ್ಯಕ್ಕೆ- ಸಂಚಾರ ಮಾರ್ಗದಲ್ಲಿ ಬದಲಾವಣೆ

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಉದ್ಘಾಟನೆಗಾಗಿ ನಾಳೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 7 ಗಂಟೆಯಿಂದ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಅಗತ್ಯ ಸೇವೆ ಮತ್ತು ಹಾಲಿನ ವಾಹನಗಳಿಗೆ ಮಾತ್ರ ಬೆಳಿಗ್ಗೆ 9 ಗಂಟೆಯವರೆಗೆ ಸರ್ವೀಸ್ ರಸ್ತೆಯಲ್ಲಿ ತೆರಳಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯ ಬಳಿ ನಡೆಯುವ ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ವಾಹನಗಳಿಗೆ ಈ ಕೆಳಕಂಡಂತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. 

ಮಳವಳ್ಳಿ ಕಡೆಯಿಂದ ಬರುವ ವಾಹನಗಳು ಕೆ.ಎಂ.ದೊಡ್ಡಿ-ಹುಣ್ಣನದೊಡ್ಡಿ, ಬೋರಾಪರ ಗೇಟ್ ಮಾರ್ಗವಾಗಿ ಮದ್ದೂರಿಗೆ 04 ಕಿಲೋ ಮೀಟರ್ ಹಿಂದಕ್ಕೆ ಎಡಗಡೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು, ಮದ್ದೂರು ಮತ್ತು ಸುತ್ತಮುತ್ತಲ ಕಡೆಯಿಂದ ತೆರಳುವ ವಾಹನಗಳು, ಮದ್ದೂರು- ಐ.ಬಿ.ವೃತ್ತ- ಮಳವಳ್ಳಿ ರಸ್ತೆಯಿಂದ ಸುಮಾರು 04 ಕಿ.ಮೀ ಮುಂದಕ್ಕೆ ಹೋಗಿ ಬಲಗಡೆಗೆ ಕುದುರುಗುಂಡಿ ಕಾಲೋನಿಗೆ ಹೋಗುವ ಮಾರ್ಗದಲ್ಲಿ ಹೋಗಿ ಪಾರ್ಕಿಂಗ್ ಸ್ಥಳಕ್ಕೆ ತೆರಳಬಹುದಾಗಿದೆ.

ಗೆಜ್ಜಲಗೆರೆ ಸುತ್ತಮುತ್ತಲ ಗ್ರಾಮಗಳಿಂದ ತೆರಳುವವರು ಗೆಜ್ಜಲಗೆರೆ ಅಂಡರ್‍ಪಾಸ್‍ನಿಂದ ಕುದುರುಗುಂಡಿ ಗ್ರಾಮ, ಸಾದೋಳಲು ಕುದುರುಗುಂಡಿ ಕಾಲೋನಿ ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳುವುದು, ಮಂಡ್ಯ ಕಡೆಯಿಂದ ಬರುವ ವಾಹನಗಳು ಹನಕೆರೆ ಸರ್ವೀಸ್ ರೋಡ್‍ನಿಂದ ಗೆಜ್ಜಲಗೆರೆ ಗ್ರಾಮದ ಬಳಿಬಂದು ಗೆಜ್ಜಲಗೆರೆ ಅಂಡರ್‍ಪಾಸ್‍ನಿಂದ ಕುದುರುಗುಂಡಿ ಗ್ರಾಮ,ಸಾದೋಳಲು ಕುದುರುಗುಂಡಿ ಕಾಲೋನಿ ಮಾರ್ಗವಾಗಿ ಪಾರ್ಕಿಂಗ್ ಜಾಗಕ್ಕೆ ತೆರಳಬೇಕು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮಂಡ್ಯ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಪ್ರಧಾನಿ ರೋಡ್ ಶೋ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಸ್ಥಳಗಳಲ್ಲಿ 15 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ರಹಿತ ಡ್ರೋಣ್ ಕ್ಯಾಮರಾ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ  ಆದೇಶ  ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!