ಮುತಾಲಿಕ್ ಕಾರ್ಕಳದಲ್ಲೇ ಸ್ಪರ್ಧಿಸುವುದಾದರೆ ಸಂಘಟನೆ ನಮಗೆ ಬಿಟ್ಟುಕೊಡಲಿ- ಮೋಹನ್ ಭಟ್

ಉಡುಪಿ: ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದು ಶ್ರೀರಾಮಸೇನೆ ಕಾರ್ಯಕರ್ತರಲ್ಲಿ ಗೊಂದಲ‌ ಮೂಡಿಸಿದೆ.ಕಾರ್ಕಳದಲ್ಲಿ ಶ್ರೀರಾಮಸೇನೆ ಸಂಘಟನೆ ಬಲಯುತವಾಗಿಲ್ಲ, ಇಲ್ಲಿ ಗೆಲ್ಲುವುದು ಅಸಾಧ್ಯ. ಹೀಗಾಗಿ ಮುತಾಲಿಕ್ ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಉತ್ತಮ ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್ ಹೇಳಿದರು.

ಉಡುಪಿ ಖಾಸಗಿ ಹೊಟೇಲ್ ನಲ್ಲಿ ಇಂದು ನಡೆದ ಶ್ರೀರಾಮ‌ಸೇನೆ ಕಾರ್ಯಕರ್ತರ ಬೈಠಕ್ ನಲ್ಲಿ ಅವರು ಮಾತನಾಡಿದರು. ಸಿಟಿ ರವಿ ಅವರು, ಮುತಾಲಿಕ್ ಅವರಿಗೆ ತೇರದಾಳ ಅಥವಾ‌ ಜಮಖಂಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದಾರೆ‌. ಹಾಗಾಗಿ ಕಾರ್ಕಳ ಕ್ಷೇತ್ರದ ಸ್ಪರ್ಧೆಯ ಬಗ್ಗೆ ಮುತಾಲಿಕ್ ಮರುಚಿಂತನೆ ಮಾಡಬೇಕು ಎಂದರು.

ಸಂಘಟನೆಯ ಕೆಲ ರಾಜ್ಯ ನಾಯಕರು ಹಾಗೂ ಉದ್ಯಮಿ ವಿವೇಕಾನಂದ ಶೆಣೈ ಮತ್ತು ವಕೀಲ ಹರೀಶ್ ಅಧಿಕಾರಿ ಸೇರಿಕೊಂಡು ಪ್ರಮೋದ್ ಮುತಾಲಿಕ್ ಅವರನ್ನು ಹೈಜಾಕ್ ಮಾಡಿ ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕೆ ಇಳಿಸಿದ್ದಾರೆ. ಇವರೆಲ್ಲರು ರಾಜಕೀಯ ದುರಾಸೆಯಿಂದ ಇಡೀ ಸಂಘಟನೆಯನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಪರಮೋಚ್ಚ ನಾಯಕರಾಗಿರುವ ಪ್ರಮೋದ್ ಮುತಾಲಿಕ್ ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಅವರ ಜೊತೆ ನಮ್ಮ ಸಂಘಟನೆಯ ಮಾರ್ಯದೆ ಹೋಗುತ್ತದೆ. ಇದು ಇತಿಹಾಸದಲ್ಲೇ ದೊಡ್ಡ ದುರಂತ ಆಗುತ್ತದೆ ಎಂದರು.

ವಾರದ ಹಿಂದೆ ಪತ್ರಿಕಾಗೋಷ್ಠಿ ಕರೆದು ಈ ವಿಚಾರ ಹೇಳಿದಾಗ ಕೆಲವರು ನನ್ನ ವಿರುದ್ಧ ಹಣ ಪಡೆದು ಕೊಂಡಿದ್ದೇನೆ,ಉಡುಪಿಯ ಸ್ವಾಮೀಜಿಯೊಬ್ಬರಿಗೆ ಹೆಣ್ಣು ಸಪ್ಲೈ ಮಾಡಿದ್ದೇ ಎಂಬ ಆರೋಪ ಮಾಡಿದರು. ನನ್ನ ಮೇಲೆ ಆರೋಪ ಮಾಡಿದವರು ಯಾರು ಕೂಡ ಸಂಘಟನೆಯ ಕಾರ್ಯಕರ್ತರಲ್ಲ. ನನ್ನ ಮೇಲೆ ಆರೋಪ ಮಾಡಿದವರು ತಾಕತ್ತಿದ್ದರೆ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ, ಧರ್ಮಸ್ಥಳದ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಹಣ ತೆಗೆದುಕೊಂಡಿಲ್ಲ ಎಂದು ಎಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದರು.

ಪ್ರಮೋದ್ ಮುತಾಲಿಕ್ ಕಾರ್ಕಳದಲ್ಲೇ ಸ್ಪರ್ಧಿಸುವುದಾದರೆ ಶ್ರೀರಾಮಸೇನೆ ಸಂಘಟನೆಯನ್ನು ನಮಗೆ ಸ್ವತಂತ್ರವಾಗಿ ಬಿಟ್ಟುಕೊಡಲಿ. ನಿಮ್ಮ ರಾಜಕೀಯ ದೊಂಬರಾಟಕ್ಕೆ ನಮ್ಮ ಬಳಸಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದರು.ಲ

ಶ್ರೀರಾಮಸೇನೆಯ ರಾಜ್ಯ ಉಪಾಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿದರು. ಮುಖಂಡರಾದ ಚಂದ್ರಕಾಂತ್ ಶೆಟ್ಟಿ, ಸಂದೀಪ್ ಮೂಡುಬೆಟ್ಟು, ಕೀರ್ತಿರಾಜ್,‌ ಶ್ರೀನಿವಾಸ್ ರಾವ್, ಶಾರದಮ್ಮ, ಪ್ರಶಾಂತ್ ಬಂಗೇರ, ರಾಘವೇಂದ್ರ‌‌ ಕೆಸವೆ ಉಪಸ್ಥಿತರಿದ್ದರು.

1 thought on “ಮುತಾಲಿಕ್ ಕಾರ್ಕಳದಲ್ಲೇ ಸ್ಪರ್ಧಿಸುವುದಾದರೆ ಸಂಘಟನೆ ನಮಗೆ ಬಿಟ್ಟುಕೊಡಲಿ- ಮೋಹನ್ ಭಟ್

  1. He should fight in Karkal it self against corruption and public money loted by our current minister from BJP ????
    What is wrong ???
    We are the voted happy to put our valid vote to clean person , voter can change and not just group of people
    So people first in this country

Leave a Reply

Your email address will not be published. Required fields are marked *

error: Content is protected !!