ಕಾಪು: ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ರೋಶನಿ ಡಿಸೋಜಾ ಸಾವಿಗೆ ಕಾರಣ?
ಕಾಪು, ಫೆ.14: ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಬಳಿ ಬ್ಯಾರಿಕೇಡ್ ಗೆ ಸ್ಕೂಟರ್ ಡಿಕ್ಕಿ ಹೊಡೆದು ಯುವತಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡ ಸ್ಕೂಟರ್’ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಸಹಸವಾರೆ ಯುವತಿ ಕಾಸಿಯಾದ ರೋಶನಿ ಡಿಸೋಜಾ (27) ಅವರು ಮೃತಪಟ್ಟಿದ್ದಾರೆ ಎಂದು ಸ್ಕೂಟರ್ ಸವಾರ ಸಿದ್ದಕಟ್ಟೆಯ ಜೋಯಲ್ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವಕ ಹಾಗೂ ಯುವತಿ ಉಡುಪಿ ಮಂಗಳೂರು ರಸ್ತೆಯಲ್ಲಿ ಮಂಗಳೂರು ಕಡೆಗೆ ರಸ್ತೆಯ ಬಲಬದಿಯಲ್ಲಿ ಡಿವೈಡರ್ ಪಕ್ಕದಲ್ಲಿ ಸ್ಕೂಟರ್ ಹೋಗುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದವ ಏಕಾಏಕಿಯಾಗಿ ಬಸ್ಸನ್ನು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟರ್ ಹಿಂದೆ ಕುಳಿತಿದ್ದ ರೋಶನಿ ಯವರ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.
ಬಸ್ಸು ರೋಶನಿಯ ಕಾಲಿಗೆ ಡಿಕ್ಕಿ ಹೊಡೆದ ಕಾರಣ ನೋವಿನಿಂದ ಅತ್ತಿತ್ತ ವಾಲಾಡಿದ ಕಾರಣ ಸ್ಕೂಟರ್ ನನ್ನ ನಿಯಂತ್ರಣ ತಪ್ಪಿ ಮುಂದೆ ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ನಡೆಯುತ್ತಿದ್ದ ಕಾರಣ ರಸ್ತೆಯ ಬಲಬದಿಗೆ ಅಡ್ಡವಿಟ್ಟಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ವಲ್ಪ ಮುಂದಕ್ಕೆ ಹೋಗಿ ಸ್ಕೂಟರ್ ಸಮೇತ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡ ರೋಶನಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದೀಗ ಘಟನೆಗೆ ಸಂಬಂಧಿಸಿ ಸವಾರ ಪ್ರಥಮ ಚಿಕಿತ್ಸೆ ಪಡೆದು ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.