ಉಡುಪಿ: ಕಾರು-ಬೈಕ್ ಮುಖಾಮುಖಿ ಡಿಕ್ಕಿ, ಗ್ಯಾರೇಜ್ ಮಾಲೀಕ ಸಾವು
ಉಡುಪಿ,ಫೆ.13(ಉಡುಪಿ ಟೈಮ್ಸ್ ವರದಿ): ಇಲ್ಲಿನ ಕುಂಜಿಬೆಟ್ಟು ಶಾರದಾ ಕಲ್ಯಾಣಮಂಟಪ ಸಮೀಪ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಭಾನುವಾರ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಮೃತಪಟ್ಟಿದ್ದಾರೆ.
ಮೃತರನ್ನು ದೊಡ್ಡಣಗುಡ್ಡೆ ನೇಕಾರರ ಕಾಲೋನಿ ನಿವಾಸಿ ದಾಮೋದರ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಇವರು ಕುಂಜಿಬೆಟ್ಟುನಲ್ಲಿ ಗ್ಯಾರೇಜ್ ವೊಂದನ್ನು ನಡೆಸುತ್ತಿದ್ದರು. ಇವರು ಭಾನುವಾರ ಮುಂಜಾನೆ 5.30ರ ಸುಮಾರಿಗೆ ಎಂದಿನಂತೆ ದೇವರ ದರ್ಶನ ಪಡೆಯಲೆಂದು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನಕ್ಕೆ ತೆರಳುತ್ತಿದ್ದರು.
ಅದರಂತೆ ಎಂಜಿಎಂ ಕಾಲೇಜಿನಿಂದ ಉಡುಪಿ ಕಡೆಗೆ ಬರುತ್ತಿದ್ದಾಗ ಉಡುಪಿಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ದಾಮೋದರ ಶೆಟ್ಟಿಗಾರ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಮಣಿಪಾಲ ಮ್ಯಾರಾಥಾನ್ ಗಾಗಿ ಉಡುಪಿಯಿಂದ ಎಂಜಿಎಂ ಕಾಲೇಜಿನ ವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸರಿಯಾದ ಸೂಚನಾ ಫಲಕಗಳನ್ನು ಹಾಕದೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿ, ನಿರ್ಲಕ್ಷ್ಯತನ ತೋರಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.