ಮುತಾಲಿಕ್ ಗೆಲುವೇ ನಮ್ಮ ಗುರಿ- ಶ್ರೀರಾಮ ಸೇನೆ ಉಡುಪಿ

ಉಡುಪಿ: ಹಿಂದುತ್ವಕ್ಕಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿರುವ ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ನಮಗೆಲ್ಲ ಅತ್ಯಂತ ಸಂತೋಷದ ವಿಷಯ. ಅದರಲ್ಲೂ ಧರ್ಮೋದ್ಧಾರಕ ಶ್ರೀಕೃಷ್ಣನ ನಾಡಾದ ಉಡುಪಿಯ ನೆರೆಯ ಕ್ಷೇತ್ರವಾದ ಕಾರ್ಕಳದಲ್ಲಿ ಸ್ಪರ್ಧಿಸುತ್ತಿರುವುದು ಶ್ರೀಕೃಷ್ಣನ ಅಭಯವೇ ಹೊರತು ಬೇರೇನಿಲ್ಲ.

ಮುತಾಲಿಕ್ ರವರು ಕಾರ್ಕಳದಲ್ಲಿ ಸ್ಪರ್ಧೆಯನ್ನು ಖಚಿತ ಮಾಡಿದ ನಂತರ ಉಡುಪಿ ಜಿಲ್ಲಾ ಶ್ರೀರಾಮ ಸೇನೆಯು ಅವರ ಹಿಂದಿದೆ. ನಮಗೆ ವ್ಯಕ್ತಿ, ಪಕ್ಷಕಿಂತ ಹಿಂದುತ್ವನೇ ಮುಖ್ಯ ಎಂಬ ಆಧಾರದಲ್ಲಿ ಹಿಂದುತ್ವದ ಪ್ರಬಲ ನಾಯಕನನ್ನು ವಿಧಾನಸಭೆಗೆ ಕಳಿಸುವುದು ನಾವಂತೂ ಖಚಿತ. ಇದರಲ್ಲಿ ನಮ್ಮ ಕಾರ್ಯಕರ್ತರು, ಮುತಾಲಿಕ್ ಅಭಿಮಾನಿಗಳು, ಸರ್ವ ಹಿಂದೂ ಅಭಿಮಾನಿಗಳಿಗೆ ಯಾವುದೇ ಸಂಶಯ ಬೇಡ. 2 ದಿವಸದ ಹಿಂದೆ ಕಾರ್ಕಳದಲ್ಲಿ ಮುತಾಲಿಕರವರ ಸಂಘಟನಾ ಕಾರ್ಯಾಲಯ ಪಾಂಚಜನ್ಯ ಉದ್ಘಾಟನೆಗೊಂಡಿತ್ತು. ಇದರಲ್ಲಿ 150ಕ್ಕೂ ಹೆಚ್ಚು ಉಡುಪಿಯ ಶ್ರೀರಾಮ ಸೇನೆಯ ಕಾರ್ಯಕರ್ತರು ಭಾಗವಹಿಸಿರುವುದು ಇದಕ್ಕೆಲ್ಲ ಸಾಕ್ಷಿಯಾಗಿದೆ.

ಅದಲ್ಲದೆ ರಾಜ್ಯದ 22 ಜಿಲ್ಲೆಗಳ ಶ್ರೀರಾಮಸೇನೆಯ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲದೆ ಸುಮಾರು ನೂರಕ್ಕಿಂತಲೂ ಹೆಚ್ಚು ಕಾರ್ಯಕರ್ತರು ರಾಜ್ಯದಿಂದ ಪೂರ್ಣವಾದಿಯಾಗಿ ದುಡಿಯಲು ಈಗಾಗಲೇ ಬೀಡು ಬಿಟ್ಟಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯಕರ್ತರು ಮುಂದಿನ ಕೆಲವೇ ದಿನಗಳಿಂದ ಬೂತ್ ಮಟ್ಟದಿಂದ ಪ್ರಚಾರವನ್ನು ಕೈಗೊಳ್ಳಲಿದ್ದಾರೆ. ಒಬ್ಬ ಪ್ರಖರ ಹಿಂದೂ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರು ನಮ್ಮದೇ ನೆರೆಯ ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಉಡುಪಿ ಜಿಲ್ಲೆಯವರಿಗೆ ಹೆಮ್ಮೆಯ ವಿಷಯ. ಹಾಗಾಗಿ ಕಾರ್ಕಳ ಕ್ಷೇತ್ರದ ಅಪಾರ ಹಿಂದೂ ಅಭಿಮಾನಿಗಳು, ವಿವಿಧ ಸಂಘಟನೆಯ/ ಪಕ್ಷಗಳ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮುತಾಲಿಕ್ ರವರನ್ನು ಬೆಂಬಲಿಸಿರುವುದು ಅತ್ಯಂತ ಸಂತೋಷದ ವಿಷಯ.

ಮುತಾಲಿಕ್ ರವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸಭೆಗೆ ಭಗವಾಧ್ವಜ ಮೂಲಕ ಕಳುಹಿಸಿವುದು ನಿಶ್ಚಿತ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಮುತಾಲಿಕ್ ರವರ ಹಿಂದುತ್ವದ ಗೆಲುವು ನಿಶ್ಚಿತ ಎಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಹಾಗೂ ಜಿಲ್ಲಾ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!