ಅಕ್ರಮ ಕೋರೆ,ಮರಳು, ಜುಗಾರಿ ಅಡ್ಡೆಗಳು ಸಚಿವರ ಆಪ್ತರಿಗೆ-ಸರ್ಕಾರಿ ಕಚೇರಿಗಳಲ್ಲಿ ಲಂಚ ಇಲ್ಲದೇ ಕೆಲಸವಿಲ್ಲ: ಕಾರ್ಕಳ ಕಾಂಗ್ರೆಸ್ ಆರೋಪ

ಕಾರ್ಕಳ, ಫೆ 10: ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನೀಲ್‍ಕುಮಾರ್ ಸರಕಾರಿ ಯಂತ್ರವನ್ನು ದುರುಪಯೋಗಪಡಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯ ಸ್ಥಿತಿಗತಿ ದುರ್ಬಲವಾಗತೊಡಗಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ.

ಕಾರ್ಕಳದ ಹೋಟೆಲ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಷ್ಯನ ಭ್ರಷ್ಟಾಚಾರವನ್ನು ಹೊರಗೆಡವಲು ಗುರು ಪ್ರಮೋದ್ ಮುತಾಲಿಕ್ ಕಾರ್ಕಳ್ಕಕೆ ಆಗಮಿಸಿದ್ದಾರೆ. ಚುನಾವಣಾ ಸ್ವರ್ಧೆ ಕಣದಲ್ಲಿ ಅವರು ಉತ್ತರಿಸಲಿದ್ದಾರೆ. ಪ್ರಖರ ಆರೋಪಗಳು ಸುನೀಲ್ ಅವರ ರಾಜಕೀಯ ಬೆಳವಣಿಗೆ ಕುಂಠಿತಗೊಳ್ಳಲಿದೆ. ಪಂಚಾಯತ್ ಮಟ್ಟದಿಂದ ತಾಲೂಕು ಕಚೇರಿಯವರೆಗೆ ಭ್ರಷ್ಟಾಚಾರವು ವ್ಯಾಪಕವಾಗಿ ಹರಡಿದ್ದು ಕಾನೂನು ಸುವ್ಯವಸ್ಥೆ ನೀತಿ ನಿಯಮಗಳಿಗೆ ಬೆಲೆ ಇಲ್ಲದಂತಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಹೋಗಿ ಲಂಚ ಇಲ್ಲದೇ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರು ಭಾರಿ ಚುನಾಯಿತರಾಗಿ ಮುಖ್ಯಮಂತ್ರಿಯಾಗಿರುವ ಎಂ. ವೀರಪ್ಪ ಮೊಯಿಲಿ ಹಾಗೂ ಎರಡು ಬಾರಿ ಶಾಸಕರಾಗಿದ್ದ ಎಚ್. ಗೋಪಾಲ ಭಂಡಾರಿ ಅವರ ಅವಧಿಯಲ್ಲಿ ಕಾರ್ಕಳ ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಗ್ರಾಮೀಣ ಭಾಗದಲ್ಲಿ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು,ಆಸ್ಪತ್ರೆಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು. ಸರಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಹುದ್ದೆಗಳು ಭರ್ತಿಯಾಗಿ ಜನಸಾಮಾನ್ಯರ ಕೆಲಸ ಕಾರ್ಯಗಳು ನಿರಂತರವಾಗಿ ಸಾಗುತ್ತಿತ್ತು. ಆದರೆ ಇಂದು ಅದೇ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಇಲ್ಲ. ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆಗಳು ಖಾಲಿ ಖಾಲಿ. ಇದು ಜನಸಾಮಾನ್ಯರ ಆರೋಗ್ಯದ ಕುರಿತು ಸರಕಾರವು ನಿರ್ಲಕ್ಷ್ಯಿಸುತ್ತಿದೆ ಎಂಬುವುದಕ್ಕೆ ಹಿಡಿದ ಕೈಗನ್ನಡಗಿಯಾಗಿದೆ ಎಂದು ಅವರು ಆರೋಪಿಸಿದರು.

ಕಮಿಷನ್ ಲೆಕ್ಕಾಚಾರದಲ್ಲಿ ಎಲ್ಲಾ ಇಲಾಖೆಗಳಲ್ಲಿ ವ್ಯವಹಾರ ಸಾಗುತ್ತಿದೆ. ಇಲ್ಲದೇ ಹೋದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಸಚಿವರ ಆಪ್ತರೆಂದು ಗುರುತಿಸಿ ಕೊಂಡವರು ಎಲ್ಲ ಕಾನೂನು ನೀತಿ ನಿಯಮಗಳನ್ನು ಮಾಡಿ ಗಣಿಗಾರಿಕೆ ಕಲ್ಲು ಕೋರೆ ಪರವಾನಿಗೆ ಇಲ್ಲದೇ ಹೊಯಿಗೆ ದಂಧೆ, ಲೈಸೆನ್ಸ್ ಇಲ್ಲದೆ ಜುಗಾರಿ ಅಡ್ಡೆಗಳು, ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಸಚಿವರ ಆಪ್ತರು ನಡೆಸುತ್ತಿರುವ ಎಲ್ಲ ಹಗರಣಗಳು ಪೊಲೀಸ್ ಇಲಾಖೆ, ಕಂದಾಯ ಇಲಾಖೆಯನ್ನು ಮನ ಬಂದಂತೆ ಸಚಿವರ ಏಜೆಂಟ್‍ರು ನಡೆಸುತ್ತಿರುವ ಅವ್ಯವವಹಾರಗಳು ತಮಗೆ ಈಗಾಗಲೇ ಮಾಹಿತಿ ಇದೆ. ಎಲ್ಲ ಇಲಾಖೆಗಳಲ್ಲಿ ಕಾಂಟಾಕ್ಟ್ ವ್ಯವಸ್ಥೆ ಬೆಳಕಿನ ಯೋಜನೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ರೈತರಿಗೆ, ಕೃಷಿ, ವಿದ್ಯುತ್ ತಾಂತ್ರಿಕ ಸಲಕರಣೆಗಳಿಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನೇಮಕಾತಿಯಲ್ಲಿ ಲಂಚ. ಇಂತಹ ಸಚಿವರು ಕಾರ್ಕಳದ ಸಂಸ್ಕೃತಿಗೆ ಅರ್ಹರಲ್ಲ ಎಂದು ಇದೇ ಸಂದರ್ಭದಲ್ಲಿ ಮಂಜುನಾಥ ಪೂಜಾರಿ ವಾಗ್ದಾಳಿ ನಡೆಸಿದರು.

ಉಡುಪಿಯಲ್ಲಿ ನಡೆಯುತ್ತಿರುವ ರಾಜ್ಯ ಯಕ್ಷಗಾನ ಸಮ್ಮೇಳನವನ್ನು ಪ್ರಶಂಸಿಸಿದ ಮಂಜುನಾಥ್ ಪೂಜಾರಿ, ಆದರೆ ಅಂಬೇಡ್ಕರ್, ಕುವೆಂಪು ಅವರನ್ನು ತಿರುಚಿ ಬರೆದ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸುತ್ತಿರುವುದು ಕಾರ್ಕಳ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಘಟಕ ಖಂಡಿಸುತ್ತದೆ ಎಂದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್‌ನ ಸದಾಶಿವ ದೇವಾಡಿಗ, ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್, ಪ್ರಭಾಕರ್ ಬಂಗೇರ, ಬಾನು ಭಾಸ್ಕರ್, ಜಾಯ್ ಟೆಲ್ಲಿಸ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!