ಹಿರಿಯಡ್ಕ: ಮೇಸ್ತ್ರಿ ನೇಣಿಗೆ ಶರಣು- ಸಂಶಯ ವ್ಯಕ್ತಪಡಿಸಿ ಸಹೋದರನಿಂದ ದೂರು

ಹಿರಿಯಡ್ಕ ನ.3 (ಉಡುಪಿ ಟೈಮ್ಸ್ ವರದಿ): ಇಲ್ಲಿನ ಚೋಳಬೆಟ್ಟುವಿನ ಮಜಲು ಗುಡ್ಡೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ಇದೀಗ ಮೃತರ ಅಣ್ಣ, ತಮ್ಮನ ಮರಣದಲ್ಲಿ ಸಂಶಯ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದಾರೆ.

ಸುಧಾಕರ ನಾಯ್ಕ(43) ಆತ್ಮಹತ್ಯೆ ಮಾಡಿಕೊಂಡವರು. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಸುಧಾಕರ ನಾಯ್ಕ ಅವರು ಹೆಂಡತಿ ಹಾಗೂ ಮಗನೊಂದಿಗೆ ಚೋಳಬೆಟ್ಟುವಿನ ಮಜಲು ಗುಡ್ಡೆಯಲ್ಲಿ ವಾಸ ಮಾಡಿಕೊಂಡಿದ್ದರು. ಸುಧಾಕರ ರವರಿಗೆ ಮೊದಲಿನಿಂದಲೂ ಕುಡಿತದ ಅಭ್ಯಾಸವಿದ್ದು ಇದರಿಂದ ಆಗಾಗ ಮನೆಯಲ್ಲಿ ಹೆಂಡತಿಯೊಂದಿಗೆ ಗಲಾಟೆಯಾಗಿ ಹೊಡೆದಾಡಿಕೊಳ್ಳುತ್ತಿದ್ದರು. ಬಳಿಕ ಸರಿಯಾಗಿ ಹೊಂದಿಕೊಂಡು ಹೋಗುತ್ತಿದ್ದರು. ನ.2 ರಂದು ಬೆಳಿಗ್ಗೆ ಸುಧಾಕರ ಅವರು ತಮ್ಮ ಅಣ್ಣ ಜಯಕರ ನಾಯ್ಕ ಅವರ ಮನೆಯ ಬಳಿ ಬಂದು ಸ್ವಲ್ಪ ಹೊತ್ತು ಇದ್ದು ಬಳಿಕ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು. ಆದರೆ ಸಂಜೆ ವೇಳೆ ಜಯಕರ ನಾಯ್ಕ ಅವರ ಭಾವ ಸತೀಶ ನಾಯ್ಕ ಅವರು ಕರೆ ಮಾಡಿ ಸುಧಾಕರ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.

ಕೂಡಲೇ ಜಯಕರ ಅವರು ಹೊರಟು ಸುಧಾಕರ ಅವರ ಮನೆಗೆ ಬಂದು ನೋಡಿದಾಗ ಸುಧಾಕರ ಅವರು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿದೆ. ಮೃತ ದೇಹವು ನೇತಾಡುತ್ತಿದ್ದು ಕಾಲಿನ ಕೆಳಗೆ ಇಟ್ಟಿದ್ದ ಟಿಫಾಯಿಗೆ ಕಾಲುಗಳು ತಾಗಿಕೊಂಡಿದ್ದವು. ಅಲ್ಲದೆ ಕುಕ್ಕೆಹಳ್ಳಿಯ ಚೋಳಬೆಟ್ಟುವಿನ ಸುನೀಲ್ ಎಂಬಾತ 15 ದಿನಗಳ ಹಿಂದೆ ಸುಧಾಕರ ಅವರಿಗೆ ಹೊಡೆದಿರುತ್ತಾನೆ. ಈ ನಡುವೆ 15 ದಿನಗಳ ಹಿಂದೆ ಗಂಡ ಹೆಂಡತಿ ಮದ್ಯೆ ಗಲಾಟೆಯಾಗಿ ಹೆಂಡತಿ ಗಂಡನಿಗೆ ಹೊಡೆದಿರುವುದಾಗಿಯೂ ತಿಳಿದು ಬಂದಿದ್ದು, ಸುಧಾಕರ ಅವರ ಮರಣದಲ್ಲಿ ಸಂಶಯ ಇದ್ದು ಈ ಬಗ್ಗೆ ತನಿಖೆ ನಡೆಸಬೇಕಾಗಿ ಜಯಕರ ನಾಯ್ಕ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!