ಶಿವಮೊಗ್ಗ ಹರ್ಷನ ಕುಟುಂಬಕ್ಕೆ ಕೊಲೆ ಬೆದರಿಕೆ: ತನಿಖೆಯಲ್ಲಿ ಯಾವುದೇ ಅಂಶ ಕಂಡು ಬಂದಿಲ್ಲ- ಎಸ್ಪಿ

ಶಿವಮೊಗ್ಗ, ಅ.27: ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಕೊಲೆ ಬೆದರಿಕೆ ಇರುವ ಬಗ್ಗೆ ತನಿಖೆಯಲ್ಲಿ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಿಡಿಗೇಡಿಗಳಿಂದ ಹರ್ಷ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಈತನಕ ಯಾವುದೇ ದೂರು ಬಂದಿಲ್ಲ. ನಗರದಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವರೆಗಿನ ತನಿಖೆಯಲ್ಲಿ ಹರ್ಷ ಕುಟುಂಬಕ್ಕೆ ಜೀವ ಬೆದರಿಕೆ ಇರುವ ಬಗ್ಗೆ ಯಾವುದೇ ಅಂಶ ಕಂಡು ಬಂದಿಲ್ಲ’ ಎಂದು ತಿಳಿಸಿದರು. 

‘ಕೇವಲ ಹರ್ಷ ಸಹೋದರಿ ಅಶ್ವಿನಿ ಕುಟುಂಬಕ್ಕಲ್ಲ, ಇಡೀ ಶಿವಮೊಗ್ಗಕ್ಕೆ ರಕ್ಷಣೆ ನೀಡಲು ಇಲಾಖೆ ಸಿದ್ಧವಿದೆ. ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರ ಮೇಲೆ ಯಾವುದೇ ಒತ್ತಡ ಬಂದಿಲ್ಲ’ ಎಂದು ಹೇಳಿದರು. 

ಇದೇ ವೇಳೆ ವೆಂಕಟೇಶ ನಗರದಲ್ಲಿ ನಡೆದ ವಿಜಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದ ಬಂಧಿತ ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆರೋಪಿಗಳ ಪೈಕಿ ದರ್ಶನ್ ಈ ಹಿಂದೆ ಬಾಲಾಪರಾಧಿಯಾಗಿದ್ದ. ವಿಜಯ್ ಮನೆಯಿಂದ ಹೊರಗೆ ಹೋದಾಗ ಕೊಲೆ ನಡೆದಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!