ಶಿವಮೊಗ್ಗ: ಹರ್ಷ ಮನೆ ಬಳಿ ತಂಡದಿಂದ ಲಾಂಗು ಮಚ್ಚು ಹಿಡಿದು ಪುಂಡಾಟ ಬೆದರಿಕೆ
ಶಿವಮೊಗ್ಗ ಅ.24: ಇತ್ತೀಚಿಗೆ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಹರ್ಷನ ಮನೆಯ ಬಳಿ ದುಷ್ಕರ್ಮಿಗಳ ತಂಡವೊಂದು ಲಾಂಗು ಮಚ್ಚುಗಳನ್ನು ಹಿಡಿದು ಪುಂಡಾಟ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆಯೊಂದು ವರದಿಯಾಗಿದೆ.
ನಿನ್ನೆ ರಾತ್ರಿ ಮನೆ ಸಮೀಪ ಬಂದ ತಂಡವೊಂದು ಯುವಕನ ಮೇಲೆ ಕಲ್ಲುತೂರಾಟ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.
ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡ ಹಿಂದೂ ಕಾರ್ಯಕರ್ತ ದಿ. ಹರ್ಷನ ಮನೆಯ ಬಳಿ ನಿಂತು ಲಾಂಗು ಮಚ್ಚುಗಳನ್ನು ಹಿಡಿದು ಪುಂಡಾಟ ಮೆರೆದಿದ್ದಾರೆ ಅಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಈ ವೇಳೆ ಸ್ಥಳೀಯರು ದುಷ್ಕರ್ಮಿಗಳನ್ನು ಹಿಂಬಾಲಿಸಲು ಮುಂದಾಗುತ್ತಿದ್ದಂತೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಇದರಿಂದ ಓರ್ವ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಮೂರು ದಿನದ ಹಿಂದೆ ಹರ್ಷ ಸಹೋದರಿ ಅಶ್ವಿನಿ ವಿರುದ್ಧ ಅನ್ಯಕೋಮಿನ ವ್ಯಕ್ತಿಯ ಕಾರು ಜಖಂಗೊಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ದುಷ್ಕರ್ಮಿಗಳು ಗಲಾಟೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ದೊಡ್ಡ ಪೇಟೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.