ಕುಂದಾಪುರ: ಕಾರು ಹಾಯಿಸಿ ದ್ವಿಚಕ್ರ ವಾಹನ ಸವಾರನ ಕೊಲೆ ಯತ್ನ
![](https://udupitimes.com/wp-content/uploads/2021/05/police.jpg)
ಶಂಕರನಾರಾಯಣ ಸೆ.20(ಉಡುಪಿ ಟೈಮ್ಸ್ ವರದಿ): ಜಾಗದ ತಕಾರಿಗೆ ಸಂಬಂಧಿಸಿ ತನ್ನ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನಿಸಿರುವುದಾಗಿ ಸಿದ್ದಾಪುರ ಗ್ರಾಮದ ಸುದರ್ಶನ್ ಶೆಟ್ಟಿ ಎಂಬವರು ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರದ ಸಿದ್ದಾಪುರ ಗ್ರಾಮದ ಬಾಳೆಬೇರು ನಿವಾಸಿ ಸುಧರ್ಶನ್ ಶೆಟ್ಟಿ ಅವರಿಗೆ ಪ್ರಕರಣದ ಆರೋಪಿಗಳಾದ ರಾಜರಾಮ ಶೆಟ್ಟಿ, ರಘುರಾಮ ಶೆಟ್ಟಿ , ಶ್ರೀಧರ ಶೆಟ್ಟಿ ಮಂಗನಸಾಲು, ಬಿ.ಪ್ರಕಾಶ್ಚಂದ್ರ ಶೆಟ್ಟಿ ಇವರೊಂದಿಗೆ ಸಿದ್ದಾಪುರ ಗ್ರಾಮದಲ್ಲಿ ಜಾಗದ ವಿಚಾರದಲ್ಲಿ ತಕರಾರು ಇದ್ದು, ಈ ಜಾಗದ ತಕರಾರು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುತ್ತದೆ, ಅಲ್ಲದೆ ನ್ಯಾಯಾಲಯವು ಕುಂದಾಪುರ ತಾಲೂಕು ತಹಶೀಲ್ದಾರರಿಗೆ ತಕರಾರು ಇರುವ ಜಾಗವನ್ನು ಸೆ.21 ರಂದು ಸರ್ವೇ ಮಾಡಿ ವರದಿ ನೀಡುವಂತೆ ಆದೇಶ ಮಾಡಿದೆ. ಈ ಜಾಗದ ತಕರಾರಿನ ಬಗ್ಗೆ ಸುಧರ್ಶನ್ ಶೆಟ್ಟಿ ರವರು ಹೆಚ್ಚಾಗಿ ಓಡಾಡುತ್ತಿದ್ದರು. ಇದರಿಂದ ತಮ್ಮಗೆ ತೊಂದರೆ ಆಗಬಹುದು ಎಂದು ಆರೋಪಿಗಳು, ಸೆ.18 ರಂದು ಸುದರ್ಶನ್ ಶೆಟ್ಟಿ ಅವರು ತಮ್ಮ ಸ್ಕೂಟಿಯಲ್ಲಿ ಬಾಳೆಬೇರು ಎಂಬಲ್ಲಿ ಮನೆಯ ಸಮೀಪ ನಿಲ್ಲಿಸಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಇವರ ಸ್ಕೂಟಿಯ ಮೇಲೆ ಕಾರು ಹಾಯಿಸಿದ್ದು, ಇದರಿಂದ ಸುಧರ್ಶನ್ ಶೆಟ್ಟಿರವರು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಅಪಘಾತದಿಂದ ರಸ್ತೆಗೆ ಬಿದ್ದ ಸುದರ್ಶನ್ ಶೆಟ್ಟಿ ಅವರು ಗಾಯಗೊಂಡಿದ್ದು, ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.