ಉಡುಪಿ ನಗರ ಪ್ರದೇಶದ ಹದೆಗೆಟ್ಟ ರಸ್ತೆ – ಪ್ರತಿಭಟನೆಯ ಎಚ್ಚರಿಕೆ ನೀಡಿದ‌ ಕಾಂಗ್ರೆಸ್

ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡಗಳನ್ನು ಮುಚ್ಚಿಸಿ, ಸರ್ವೀಸ್‌ ರಸ್ತೆ ನಿರ್ಮಾಣ ಸೇರಿದಂತೆ ನಗರ ಪ್ರದೇಶದ ರಸ್ತೆಯ ಗುಂಡಿಗಳನ್ನು ಮುಚ್ಚಿ ಹತ್ತು ದಿನದಲ್ಲಿ ಜನಸ್ನೇಹಿ ಆಡಳಿತ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದರು. ಆದರೆ ಪ್ರಸ್ತುತ ನಗರ ಪ್ರದೇಶದ ರಸ್ತೆಗಳು ತೀರಾ ಹದೆಗೆಟ್ಟಿರುವುದು ಆಡಳಿತ ಪಕ್ಷದ ಶೋಚನೀಯ ಸ್ಥಿತಿ ತೋರಿಸುತ್ತದೆ ಎಂದು ಉಡುಪಿ ನಗರ ಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ತಿಳಿಸಿದ್ದಾರೆ.

ನಗರದ ಹೃದಯ ಭಾಗದ ಪ್ರದೇಶದಲ್ಲಿ ಹದೆಗೆಟ್ಟ ರಸ್ತೆಯ ಕಾರಣ ನಾಗರಿಕರು ಪರಿತಾಪಿಸುವಂತಾಗಿದೆ. ಎರಡು ಸಾಮಾನ್ಯ ಸಭೆಯಲ್ಲಿ ಈ ಕುರಿತು ನಾನು ಧ್ವನಿಯೆತ್ತಿದ ಹೊರತಾಗಿಯೂ ಅದರ ಕಡೆ ಆಡಳಿತ ಪಕ್ಷದ ಸದಸ್ಯರು ಗಮನ ನೀಡಲಿಲ್ಲ. ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು,ನಾಗರಿಕರು ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ. ಆದರೆ ಅವರ ಪ್ರತಿಭಟನೆಗಳಿಗೆ ಕಿಂಚಿತ್ತು ಗಮನ ಹರಿಸದ ಆಡಳಿತ ಪಕ್ಷ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ.

ಉಡುಪಿಯ ನಾಗರಿಕರು ರಸ್ತೆಯಲ್ಲಿರುವ ದೊಡ್ಡ ದೊಡ್ಡ ಹೊಂಡಗಳ ಕಾರಣಕ್ಕೆ ಟ್ರಾಫಿಕ್ ಜಾಮ್, ಅಪಘಾತದ ಭೀತಿ ಎದುರಿಸುತ್ತಿದ್ದಾರೆ. ಶಾಸಕರಾದ ರಘುಪತಿ ಭಟ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಆದರೆ ಅವರ ಆಶ್ವಾಸನೆ ಆಶ್ವಾಸನೆಯಾಗಿ ಮಾತ್ರ ಉಳಿದಿದೆ. ಇದೇ ರೀತಿಯ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ‌ ಮಟ್ಟದ ಹೋರಾಟ ನಡೆಸಲಾಗುವುದೆಂದು ಈ ಮೂಲಕ ಎಚ್ಚರಿಸುತ್ತೇವೆ.

Leave a Reply

Your email address will not be published. Required fields are marked *

error: Content is protected !!