ಪಿಎನ್’ಬಿ ಬ್ಯಾಂಕ್ ಗೆ 42 ಕೋಟಿ ರೂ. ವಂಚನೆ ಆರೋಪ: ಮಾಜಿ ಸಂಸದೆಗೆ 5 ವರ್ಷ ಜೈಲು ಶಿಕ್ಷೆ

ಹೈದರಾಬಾದ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಕೊತಪಲ್ಲಿ ಗೀತಾ ಅವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿ ಸಿಬಿಐ ಕೋರ್ಟ್​ ಆದೇಶಿಸಿದೆ.

ಕಂಪೆನಿಯೊಂದರ ಹೆಸರಿನಲ್ಲಿ 50 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ. ಗೀತಾ ಜತೆ, ಅವರ ಪತಿ ಪಿ. ರಾಮಕೋಟೇಶ್ವರ ರಾವ್ ಅವರಿಗೂ ಕೋರ್ಟ್​ ಶಿಕ್ಷೆ ವಿಧಿಸಿದೆ. ಅವರ ಜತೆ, ಬ್ಯಾಂಕ್ ಅಧಿಕಾರಿಗಳಾದ ಬಿ.ಕೆ ಜಯಪ್ರಕಾಶ್ ಮತ್ತು ಕೆಕೆ ಅರವಿಂದಾಕ್ಷನ್ ಅವರಿಗೂ ಶಿಕ್ಷೆ ವಿಧಿಸಲಾಗಿದೆ.

50 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂಬ ಬಗ್ಗೆ ಪಿಎನ್‌ಬಿ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಗೀತಾ ಅವರ ವಿಚಾರಣೆ ನಡೆಸಿ ಚಾರ್ಜ್​ ಶೀಟ್​ ಸಲ್ಲಿಕೆ ಮಾಡಿದ್ದರು, ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಬಂಧನದ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದೇ ಇನ್ನೊಂದೆಡೆ, ಅವರ ಪರ ವಕೀಲರು ತೆಲಂಗಾಣ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. 2014ರಲ್ಲಿ ವೈಎಸ್‌ಆರ್‌ಸಿಪಿಯಿಂದ ಅರಕು ಸಂಸದರಾಗಿ ಗೆದ್ದಿದ್ದ ಕೊತಪಲ್ಲಿ ಗೀತಾ ನಂತರ ಪಕ್ಷ ತೊರೆದಿದ್ದರು. 2018 ರಲ್ಲಿ ಜನಜಾಗೃತಿ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಯಿತು. ನಂತರ ಅವರು ಬಿಜೆಪಿ ಸೇರಿದರು ಮತ್ತು ಅವರ ಪಕ್ಷವನ್ನು ಅದರಲ್ಲಿ ವಿಲೀನಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!