ಕೊಣಾಜೆ: ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ

ಕೊಣಾಜೆ ಸೆ.5: ಮದುವೆಯಾದ ಹದಿನೈದು ದಿನದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ನವವಿವಾಹಿತೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತುವಿನ ರಶ್ಮಿ ವಿಶ್ವಕರ್ಮ (24) ಆತ್ಮಹತ್ಯೆ ಮಾಡಿಕೊಂಡವರು.

ರಶ್ಮಿ ವಿಶ್ವಕರ್ಮ ಅವರಿಗೆ ಗಂಜಿಮಠ ಮೂಲದ ಹಾಗೂ ದುಬಾಯಿಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬಾತನ ಜೊತೆ ಆರು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿದ್ದು, ಕಳೆದ ಆಗಸ್ಡ್ 21 ರಂದು ವಿವಾಹ ನೆರವೇರಿತ್ತು. ಸೆ.3 ರಂದು ರಶ್ಮಿಯ ಅಕ್ಕನ ಮನೆಯಲ್ಲಿ ಔತನ ಕೂಟ ಏರ್ಪಡಿಸಲಾಗಿದ್ದು, ಅದೇ ದಿನ ರಶ್ಮಿ ಇಲಿಪಾಷಣ ಸೇವಿಸಿದ್ದರು ಎನ್ನಲಾಗಿದೆ. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!