ಸರ್ವಧರ್ಮಿಯರ ಪುಣ್ಯ ಕ್ಷೇತ್ರ ಕಲ್ಮಾಡಿ ವೆಲಂಕಣಿ ಮಾತೆ ದೇವಾಲಯಕ್ಕೆ ಹರಿದು ಬರುತ್ತಿರುವ ಜನಸಾಗರ

ಉಡುಪಿಯಿಂದ ಮಲ್ಪೆಗೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಕೇವಲ ಐದು ಕಿಲೋಮೀಟರ್ ದೂರ ಸಾಗಿದರೆ ಸಿಗುವ ಸುಂದರ ಪರಿಸರ ಕಲ್ಮಾಡಿ. ಪ್ರಕೃತಿ ಸೌಂದರ್ಯದ ಹಚ್ಚ ಹಸಿರಿನ ಈ ಪರಿಸರದಲ್ಲಿ  2018 ಜನವರಿ 6 ರಂದು ಉದ್ಘಾಟನೆಗೊಂಡ ರಾಜ್ಯದ ಮೊತ್ತ ಮೊದಲ ಮತ್ತು ಭಾರತದಲ್ಲಿ ಎರಡನೇ ಹಾಗೂ ಏಷ್ಯಾದ ಮೂರನೇ ಹಡಗಿನ ಮಾದರಿಯ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯ ನಕ್ಷತ್ರದಂತೆ ಮಿನುಗುತ್ತಿದೆ. ಸ್ವತಂತ್ರ  ದೇವಾಲಯವಾಗಿ 31 ವರ್ಷ ಸರ್ವ ಧರ್ಮೀಯರ ಜನರ ನಂಬಿಕೆಯ ಕೇಂದ್ರವಾಗಿರುವ ಈ ಪವಿತ್ರ ಕ್ಷೇತ್ರಕ್ಕೆ 45 ವರ್ಷದ ಇತಿಹಾಸವಿದೆ.

ಕಲ್ಮಾಡಿ ಪರಿಸರದಲ್ಲಿ 42 ಕಥೋಲಿಕ ಕ್ರೈಸ್ತ ಕುಟುಂಬಗಳು ವಾಸಿಸುತ್ತಿದ್ದು, ಈ  ಕುಟುಂಬಗಳು ಉಡುಪಿ ದೇವಾಲಯದ ಅಂಗವಾಗಿದ್ದವು.  ನಂತರ  ಭಾರತೀಯ ನೌಕಾದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಕಮಾಂಡರ್ ಚಾರ್ಲ್ಸ್ ಡಿಸೋಜರವರಿಗೆ ದೇವರಿಂದ ಗುರು ದೀಕ್ಷೆ ಪಡೆಯಲು ಕರೆ ಬಂದಿತ್ತು. ದೇವರ ಕರೆಗೆ ಓಗೊಟ್ಟು ಕ್ರೈಸ್ತರ ಪವಿತ್ರ ಸ್ಥಳ ರೋಮ್‌ನಲ್ಲಿ ತನ್ನ ಧರ್ಮಗುರುವಿನ ತರಬೇತಿಯನ್ನು ಮುಗಿಸಿ, ಅಂದಿನ ಫೋಪ್‌ರವರಿಂದ ಧರ್ಮಗುರುವಿನ ದೀಕ್ಷೆಯನ್ನು ಪಡೆದರು. ಗುರುದೀಕ್ಷೆ ಪಡೆದ ಬಳಿಕ ತನ್ನೂರಿಗೆ ಆಗಮಿಸಿದ ಫಾ. ಚಾರ್ಲ್ಸ್ ಡಿಸೋಜ ಪುಟ್ಟ ಪ್ರಾರ್ಥನಾ ಕೇಂದ್ರ ವನ್ನು ತನ್ನೂರಾದ ಕಲ್ಮಾಡಿಯಲ್ಲಿ ಆರಂಭಿಸಲು ನಿರ್ಧರಿಸಿದರು. ಸ್ಥಳೀಯರಿಂದ ಜಾಗವನ್ನು ಪಡೆದು ಜನರ ಸಹಕಾರದಿಂದ ಪುಟ್ಟ ಪ್ರಾರ್ಥನಾ ಕೇಂದ್ರವನ್ನು ಆರಂಭಿಸಲು ಯಶಸ್ವಿಯಾದರು. 1972 ರಲ್ಲಿ ಮಂಗಳೂರಿನ ಅಂದಿನ ಧರ್ಮಾಧ್ಯಕ್ಷರಾಗಿದ್ದ ಅತಿ ವಂದನೀಯ ಪರಮಪೂಜ್ಯ ಬಾಜಿಲ್ ಸಾಲ್ವದೋರ್ ಡಿಸೋಜಾ ಅವರು ಆಶೀರ್ವಚನ ಮಾಡಿದರು. ಅಂದಿನಿಂದ ಪ್ರಾರ್ಥನಾ ವಿಧಿಗಳು ಇಲ್ಲಿ ಆರಂಭವಾದವು.

ಕಲ್ಮಾಡಿ ಪರಿಸರದಲ್ಲಿ ಇದ್ದ 42 ಕುಟುಂಬಗಳು ಮತ್ತು ತೊಟ್ಟಂ ಪರಿಸರದ 32 ಕುಟುಂಬಗಳು ಜೊತೆಯಾಗಿ ಕಲ್ಮಾಡಿ ದೇವಾಲಯ ಸ್ವತಂತ್ರ ದೇವಾಲಯ ಆಗಬೇಕೆಂದು ಅಂದಿನ ಧರ್ಮಾಧ್ಯಕ್ಷರಲ್ಲಿ ಮನವಿಯನ್ನು ಸಲ್ಲಿಸಿದ್ದರು. ಭಕ್ತಾದಿಗಳ ವಿಶ್ವಾಸವನ್ನು ಮೆಚ್ಚಿ ಅಂದಿನ ಧರ್ಮಾಧ್ಯಕ್ಷರು ಕೆಲವೊಂದು ಧರ್ಮಗುರುಗಳನ್ನು ಸೇರಿಸಿ ಒಂದು ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯ ನಿರ್ಧಾರದಂತೆ ಕಲ್ಮಾಡಿ ಪ್ರಾರ್ಥನಾ ಕೇಂದ್ರಕ್ಕೆ ಕಾಯಂ ಧರ್ಮಗುರುಗಳನ್ನು ನೇಮಿಸಲು ನಿರ್ಧಾರ ಮಾಡಲಾಯಿತು. ಕಾರ್ಕಳ ನಕ್ರೆ ಚರ್ಚ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಂದನೀಯ ಫಾ. ಡೆನ್ನಿಸ್ ಕಾಸ್ತೆಲಿನೋರವರನ್ನು ಈ ಪ್ರಾರ್ಥನಾ ಕೇಂದ್ರದ ಪ್ರಥಮ ಧರ್ಮಗುರುಗಳಾಗಿ ಅಂದಿನ ಧರ್ಮಾಧ್ಯಕ್ಷರು ನೇಮಕ ಮಾಡಿದರು. 1987 ಆಗಸ್ಟ್ 5 ರಂದು ಈ ಪ್ರಾರ್ಥನಾ ಕೇಂದ್ರದ ಅಧಿಕಾರವನ್ನು ಸ್ವೀಕರಿಸಿದರು.

ಮುಂದುವರಿದು ಫಾ. ಡೇನಿಸ್ ಅವರ ನೇತೃತ್ವದಲ್ಲಿ ಕಲ್ಮಾಡಿಯಲ್ಲಿ ದೈನಂದಿನ ಪ್ರಾಥನಾ ವಿಧಿಗಳು ಆರಂಭವಾದವು. ಚೆನ್ನೈನ ಪವಿತ್ರ ಸ್ಥಳಕ್ಕೆ ಭೇಟಿಕೊಟ್ಟ ಧರ್ಮಗುರುಗಳು 4.5 ಅಡಿ ಎತ್ತರದ ವೆಲಂಕಣಿ ಮಾತೆಯ ಮೂರ್ತಿಯನ್ನು ಕಲ್ಮಾಡಿಗೆ ತರಲಾಯಿತು. ಈ ಮೂರ್ತಿಯನ್ನು ದೇವಾಲಯದಲ್ಲಿ ಇರಿಸಿ ಪ್ರಾರ್ಥನಾ ವಿಧಿಗಳು ನಡೆದವು. ವೆಲಂಕಣಿ ಮಾತೆಯ ಮೂರ್ತಿಯನ್ನು ನೋಡಿ ಸಂತಸಗೊಂಡಿದ್ದ ಕಲ್ಮಾಡಿಯ ಭಕ್ತರು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಸಿದ್ಧರಾದರು. 1988 ಆಗಸ್ಟ್ 14 ರಂದು  ಮಂಗಳೂರಿನಲ್ಲಿ ಧರ್ಮಾಧ್ಯಕ್ಷರು ಈ ಮೂರ್ತಿಯನ್ನು ಆಶೀರ್ವಚನ ಮಾಡಿದರು. ಬಳಿಕ ಮೂರ್ತಿಯನ್ನು ಉಡುಪಿ ದೇವಾಲಯಕ್ಕೆ ಕಳಿಸಲಾಗಿತ್ತು. ಎಲ್ಲ ಸಿದ್ಧತೆಯನ್ನು ನಡೆಸಿಕೊಂಡು ಆಗಸ್ಟ್ 15 ರಂದು ಉಡುಪಿ ದೇವಾಲಯದಿಂದ ಕಲ್ಮಾಡಿ ದೇವಾಲಯದವರೆಗೆ ಹಲವಾರು ಧರ್ಮಗುರುಗಳು ನೂರಾರು ಭಕ್ತರ ಭಕ್ತಿಯ ಮೆರವಣಿಗೆಯ ಮೂಲಕ ವೆಲಂಕಣಿ ಮಾತೆಯ ಆಶೀರ್ವಚನ ಮಾಡಿದ ಮೂರ್ತಿಯನ್ನು ಕಲ್ಮಾಡಿ ಪ್ರಾರ್ಥನಾ ಕೇಂದ್ರದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಸ್ವತಂತ್ರ ಪ್ರಾರ್ಥನಾ ಕೇಂದ್ರದಿಂದ ಸ್ವತಂತ್ರ  ದೇವಾಲಯವಾಗಲು ವಂದನೀಯ ಫಾ. ಡೆನಿಸ್ ಕಾಸ್ತೆಲಿನೋ ತಮ್ಮ ಪ್ರಯತ್ನವನ್ನು ಮುಂದುವರಿಸಿದ ಫಲವಾಗಿ 1991 ಜನವರಿ 1 ರಂದು ಧರ್ಮಾಧ್ಯಕ್ಷರು ಕಲ್ಮಾಡಿ “ಸ್ಟೆಲ್ಲಾ ಮಾರೀಸ್ ” ಅಧಿಕೃತ ದೇವಾಲಯವೆಂದು ಘೋಷಣೆ ಮಾಡಲಾಯಿತು.

1994 ಮೇ 7 ರಂದು ಕಲ್ಮಾಡಿ ದೇವಾಲಯದ ಸೃಷ್ಟಿಕರ್ತ ವಂದನೀಯ ಫಾ. ಡೆನಿಸ್ ಮೂಡುಬಿದ್ರೆ ಅಲಂಗಾರು ದೇವಾಲಯಕ್ಕೆ ವರ್ಗಾವಣೆಗೊಂಡರು. ಬಳಿಕ ಫಾ. ರಾಬರ್ಟ್ ಪಿಂಟೋ, ಫಾ.ಐವನ್ ಡಿಮೆಲ್ಲೋ, ಫಾ. ರಿಚಾರ್ಡ್ ಮಸ್ಕರೇನಸ್, ಫಾ. ಮ್ಯಾಕ್ಸಿನ್ ಮಿಸ್ಕಿತ್, ಫಾ.ಜೋಸೆಫ್ ಡಿಸೋಜಾ ಈ ದೇವಾಲಯದಲ್ಲಿ ಸೇವೆಯನ್ನು ಸಲ್ಲಿಸಿದರು. ಇವರ ಸೇವಾ ಅವಧಿಯಲ್ಲಿ ದೇವಾಲಯದ ಅಭಿವೃದ್ಧಿಗೆ ಧರ್ಮಗುರುಗಳ ಸೇವೆ ವಿಶೇಷವಾದುದು.

2012 ಜೂನ್ 4 ರಂದು ಬಾರ್ಕೂರು ದೇವಾಲಯದಿಂದ ಕಲ್ಮಾಡಿ ದೇವಾಲಯಕ್ಕೆ ವರ್ಗಾವಣೆಗೊಂಡ ವಂದನೀಯ ಫಾ. ಆಲ್ಬನ್ ಡಿಸೋಜ ರವರ ಮೂಲಕ ಕಲ್ಮಾಡಿ ದೇವಾಲಯಕ್ಕೆ ಹೊಸ ಶಕೆ ಆರಂಭವಾಯಿತು. ದೂರದ ಊರಿನಿಂದ ಸಾವಿರಾರು ಭಕ್ತರು ವೆಲಂಕಣಿ ಮಾತೆಯ ಬಳಿ ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಿದ್ದರು. ಮಾತ್ರವಲ್ಲದೆ ಫಾ. ಆಲ್ಬನ್ ಡಿಸೋಜ ರವರು “ಪ್ರಾರ್ಥನೆಯ ಧರ್ಮಗುರುಗಳು” ಎಂದೇ ಖ್ಯಾತಿಯಾದವರು. ವಿವಿಧ ರೀತಿಯ ಪ್ರಾಥನಾ ವಿಧಿಗಳು ಈ ದೇವಾಲಯದಲ್ಲಿ ಸದಾಕಾಲ ಜರುಗುತ್ತಿದೆ. ಅದರಲ್ಲೂ ವಿಶೇಷವಾಗಿ ವರ್ಷಕ್ಕೆ ಎರಡು ಬಾರಿ “ಜಾಗರಣೆಯ ವಿಶೇಷ ರಾತ್ರಿ ಪ್ರಾರ್ಥನೆಗಳು” ಆರಂಭವಾಗಿದೆ. ಜಾತಿ ಮತ ಭೇದವಿಲ್ಲದೆ ಸಾವಿರಾರು ಜನರು, ನೂರಾರು ಕುಟುಂಬಗಳು ಫಾ. ಆಲ್ಬನ್ ಡಿಸೋಜ ಅವರ ಬಳಿ ಆಶೀರ್ವಚನಕ್ಕಾಗಿ ಬರುತ್ತಾರೆ. ವಿವಿಧ ಸಂಕಷ್ಟಗಳು ನೋವು ಸಮಸ್ಯೆಗಳು ತೆಗೆದುಕೊಂಡು ಬಂದಂತಹ ಭಕ್ತಾದಿಗಳಿಗೆ ಧರ್ಮಗುರುಗಳು ವಿಶೇಷ ಪ್ರಾರ್ಥನೆ ಮೂಲಕ ಸಮಸ್ಯೆಗೆ ಪರಿಹಾರ ಕೊಡುತ್ತಾರೆ.

2014 ನವೆಂಬರ್ 1 ರಂದು ಉಡುಪಿ ಧರ್ಮಾಧ್ಯಕ್ಷರ ಜತೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ಮಾಜಿ ಸಚಿವ ವಿನಯ ಕುಮಾರ್ ಸೊರಕೆರವರು ಸಾವಿರಾರು ಭಕ್ತರ ಭಕ್ತರ ಉಪಸ್ಥಿತಿಯಲ್ಲಿ ಹೊಸ ದೇವಾಲಯಕ್ಕೆ ಶಿಲಾನ್ಯಾಸ ಮಾಡಿದರು.


ದೇವಾಲಯದ ಪಾಲನಾ ಮಂಡಳಿ ನೂತನ ದೇವಾಲಯದ ಕಟ್ಟಡ ಸಮಿತಿ ಮತ್ತು ಸಾವಿರಾರು ಭಕ್ತರ ಉತ್ಸಾಹದ ಶ್ರಮ ಮಾತ್ರವಲ್ಲದೆ ಜಾತಿ ಮತ ಭೇದವಿಲ್ಲದೆ, ದಾನಿಗಳು ನೀಡಿದ ಸಹಕಾರದಿಂದ ಬೃಹತ್ ಹಡಗಿನ ಆಕಾರದ ಹೊಸ ದೇವಾಲಯ 2018 ಜನವರಿ  6 ರ೦ದು ಧರ್ಮಾಧ್ಯಕ್ಷರು  ವಿವಿಧ ರಾಜಕೀಯ ಮುಖಂಡರು ಸಾಮಾಜಿಕ ಮುಖಂಡರ ಭಾಗೀದಾರಿಕೆಯಲ್ಲಿ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಯಿತು. ಪ್ರಸ್ತುತ ಸ್ಟೆಲ್ಲಾ ಮಾರೀಸ್ ದೇವಾಲಯದ ಉಪಾಧ್ಯಕ್ಷರಾಗಿ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ ಮತ್ತು ಪಾಲನಾ ಮಂಡಳಿ ವಿಶೇಷ ಸೇವೆಯನ್ನು ಸಲ್ಲಿಸುತ್ತಿದೆ.

ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರ : ಆಗಸ್ಟ್ 15 ವಾರ್ಷಿಕ ಮಹಾ ಹಬ್ಬ 

ರಾಜ್ಯದ ಮೊಟ್ಟ ಮೊದಲ ಮತ್ತು ಭಾರತದಲ್ಲಿ ಎರಡನೆಯ ಹಾಗೂ ಏಷ್ಯಾದ ಮೂರನೆಯ ಹಡಗಿನ ಆಕಾರದ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಆಗಸ್ಟ್ 15 ರಂದು ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವ ಹಬ್ಬ ಜರಗಲಿರುವುದು ಎಂದು ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನವರಿ 6, 2018 ರಂದು ಉದ್ಘಾಟನೆಗೊಂಡ ಹಡಗಿನಕಾರದ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ದಿನಂಪ್ರತಿ ನೂರಾರು ಭಕ್ತರು ಆಗಮಿಸುತ್ತಿದ್ದು, ಭಕ್ತರ ಪ್ರೀತಿಯ ವೆಲಂಕಣಿ ಮಾತೆಯ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.  ಆಗಸ್ಟ್ 6 ರಿಂದ ಆಗಸ್ಟ್ 14 ತನಕ ಉತ್ಸವದ ಪೂರ್ವಭಾವಿಯಾಗಿ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆಗಳು ನಡೆಯಲಿರುವುದು. 9 ಒಂಬತ್ತು ದಿನಗಳ ನೊವೆನಾ ಸಮಯದಲ್ಲಿ ವಿಶೇಷ ಉದ್ದೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ನಡೆಸಲಾಗುವುದು ಎಂದರು.

ಆಗಸ್ಟ್ 6 ರಂದು ಸಂಜೆ 3:45 ಕ್ಕೆ ಸಂತ ಜೋಸೆಫ್ ಸೆಮಿನರಿ ಮಂಗಳೂರು ಇದರ ರೆಕ್ಟರ್ ಅತಿ ವಂದನೀಯ ಫಾ. ರೊನಾಲ್ಡ್ ಸೆರಾವೊ ನೊವೆನಾ ಗೆ ಚಾಲನೆ ನೀಡುವರು. 4 ಗಂಟೆಗೆ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆ ನಡೆಯಲಿರುವುದು. ನೊವೆನಾ ಪ್ರಾರ್ಥನೆಗಳಿಗೆ ದೈನಂದಿನ ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಆಗಸ್ಟ್ 14 ರಂದು ಮಧ್ಯಾಹ್ನ 2:45 ಕ್ಕೆ ಆದಿ ಉಡುಪಿ ಜಂಕ್ಷನ್ ಬಳಿಯ ರೀಗಲ್ ನೆಕ್ಸ್ಟ್ ಅಪಾರ್ಟ್ಮೆಂಟ್ ಬಳಿಯಿಂದ ಕಲ್ಮಾಡಿ ದೇವಾಲಯದವರೆಗೆ ಮಾತೆಯ ತೇರಿನ ಮೆರವಣಿಗೆ  ನಡೆಯಲಿರುವುದು. ವಿಧಾನ ಪರಿಷತ್ತ್ ಸದಸ್ಯರಾದ ಐವಾನ್ ಡಿಸೋಜ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 4 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ದಾನ ಅವರು ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆಯನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆ ಆಗಸ್ಟ್ 15 ರಂದು ಸಂಜೆ 4 ಗಂಟೆಗೆ  ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ರವರು ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ವಹಿಸಲಿದ್ದಾರೆ. ವಾರ್ಷಿಕ ಮಹಾ ಹಬ್ಬದ ದಿನ ಬೆಳಿಗ್ಗೆಯಿಂದ ಪ್ರಾರ್ಥನಾ ವಿಧಿಗಳು ಮತ್ತು ಬಲಿ ಪೂಜೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯಬಲಿಪೂಜೆ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕನ್ನಡದಲ್ಲಿ, ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷಿನಲ್ಲಿ ಬಲಿಪೂಜೆಗಳು ನಡೆಯಲಿರುವುದು. ಬಲಿಪೂಜೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಫಾ. ಆಲ್ಬನ್ ಡಿಸೋಜ ಹೇಳಿದರು.

ಇಷ್ಟೆಲ್ಲಾ ಮಾಡಿ ದೇವಾಲಯ ಸರ್ವಧರ್ಮದ ಐಕ್ಯತೆಯ ಪುಣ್ಯಕ್ಷೇತ್ರವಾಗಿದೆ. ಜಾತಿ ಮತ ಭೇದವಿಲ್ಲದೆ ಸಹಸ್ರಾರು ಭಕ್ತಾದಿಗಳು ಬಂದು ತಮ್ಮ ಕಷ್ಟ ದುಃಖಗಳನ್ನು, ಸಮಸ್ಯೆಗಳನ್ನು, ರೋಗಗಳನ್ನು
ವೆಲಂಕಣಿ ಮಾತೆಗೆ ಸಮರ್ಪಿಸಿ ಶ್ರದ್ಧೆಯಿಂದ ಬಿಡುತ್ತಾರೆ. ಸರ್ವಧರ್ಮದ ಐಕ್ಯತೆಯ ಸಂಕೇತವಾಗಿ ಮಾನಸ್ತಂಭ (ಕೊಡಿ ಮರ) ವನ್ನು ಪ್ರಾಯೋಜಕರ ಸಹಾಯದಿಂದ ನಿರ್ಮಿಸಲಾಗಿದೆ. ಪ್ರಸ್ತುತ ವರ್ಷ ಜರುಗಿದ ವಿಶೇಷತೆಯೆಂದರೆ ಉಮೇಶ್ ಕಿದಿಯೂರ್ ರವರ ಮನೆಯಲ್ಲಿ ವೆಲಂಕಣಿ ಮಾತೆಯ ಇತಿಹಾಸವಿರುವ ಪವಾಡ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತಿತ್ತು. ಒಂದು ದಿನ ಅವರಿಗೆ ಕನಸಿನಲ್ಲಿ ‘ಈ ಮಾತೆಯನ್ನು ಮನೆಯಲ್ಲಿಟ್ಟು ಪೂಜಿಸುವುದು ಸರಿಯಲ್ಲ. ಮೂರ್ತಿಯನ್ನು ಸಹಸ್ರಾರು ಜನರಿಗೆ ಒಳ್ಳೆಯದಾಗುವ ಪವಿತ್ರ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕೆಂದು’ ದಿವ್ಯ ವಾಣಿಯ ಮೂಲಕ ಕೇಳಲಾಗಿತ್ತು. ಅದರಂತೆ ಉಮೇಶ್ ಅವರು ಕಲ್ಮಾಡಿ ದೇವಾಲಯವು ಸರ್ವಧರ್ಮದ ಪವಿತ್ರ ಸ್ಥಳವೆಂದು ಭಾವಿಸಿ, ದೇವಾಲಯದ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ಅವರೊಂದಿಗೆ ಸಮಾಲೋಚನೆ ನಡೆಸಿ, ಅವರ ಒಪ್ಪಿಗೆಯ ಮೇರೆಗೆ ಆ ಪವಾಡ ಮೂರ್ತಿಯನ್ನು ಅವರ ಮನೆಯಿಂದ ಆಶೀರ್ವದಿಸಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರದಲ್ಲಿ ಅಕ್ಟೋಬರ್ 21, 2018ರಂದು ಪ್ರತಿಷ್ಠಾಪಿಸಲಾಯಿತು.

ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯದಲ್ಲಿ ಪವಾಡಗಳು ದಿನದಿಂದ ದಿನಕ್ಕೆ ಹೆಚ್ಚಾಗಿ, ಹಲವಾರು ಸಾಕ್ಷಿಗಳನ್ನು ಭಕ್ತಾದಿಗಳು ನೀಡಿದ್ದಾರೆ. ಈ ದೇವಾಲಯವನ್ನು ಕೆಲವೇ ತಿಂಗಳುಗಳಲ್ಲಿ ಅಧಿಕೃತವಾಗಿ “ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರ”ವನ್ನಾಗಿ ಘೋಷಿಸುವ ನಿರೀಕ್ಷೆಯಲ್ಲಿದ್ದೇವೆ. ಈಗಾಗಲೇ ಇದಕ್ಕಾಗಿ ತಯಾರಿಗಳು ಪಡಿಸಲಾಗಿದ್ದು ಬೇಕಾದ 18 ದಾಖಲೆಗಳನ್ನು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ನೀಡಲಾಗಿದೆ ಪುಣ್ಯಕ್ಷೇತ್ರವನ್ನು ಘೋಷಿಸುವ ಶುಭ ದಿನ ಹತ್ತಿರದಲ್ಲಿದೆ ಎಂದು ಭಾಸವಾಗುತ್ತಿದೆ. ಭಕ್ತರಿಗೆ ಲಭಿಸುವ ಪವಾಡಗಳಿಂದ ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯವೂ ಪ್ರಪಂಚದ ಎಲ್ಲ ದೇಶಗಳಲ್ಲಿ ಪ್ರಖ್ಯಾತವಾಗಲಿ ಎಂದು ಈ ಸಂದರ್ಭದಲ್ಲಿ ವಂದನೀಯ ಫಾ. ಆಲ್ಬನ್ ಡಿಸೋಜ ಆಶಯ ವ್ಯಕ್ತಪಡಿಸಿದರು.
ವಾರ್ಷಿಕ ಮಹಾ ಹಬ್ಬದ ಉಸ್ತುವಾರಿ  ಫಾ. ಪ್ರವೀಣ್ ಮೊಂತೆರೊ ನೇತೃತ್ವದಲ್ಲಿ ಫಾ.ಆಲ್ಬನ್ ಡಿಸೋಜಾರವರ ಮಾರ್ಗದರ್ಶದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು ಪ್ರತಿಷ್ಠಾಪನ ಮಹೋತ್ಸವನ್ನು ಅದ್ದೂರಿಯಾಗಿ ನಡೆಸಲು ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ.


ಆಗಸ್ಟ್ 15 ರಂದು ಸಂಜೆ 4 ಗಂಟೆಗೆ ಉಡುಪಿ ಧರ್ಮಧ್ಯಕ್ಷರ ನೇತೃತ್ವದಲ್ಲಿ ಜರಗುವ ವಾರ್ಷಿಕ ಮಹಾ ಹಬ್ಬದ ದಿವ್ಯ ಬಲಿ ಪೂಜೆಯು ” ಉಡುಪಿ ಟೈಮ್ಸ್ ” ನಲ್ಲಿ ನೇರ ಪ್ರಸಾರವಾಗಲಿದೆ.

Leave a Reply

Your email address will not be published. Required fields are marked *

error: Content is protected !!