ಅಕ್ರಮ ಮರ ಸಾಗಾಟ : ಬೆಟ್ಟಗೇರಿಯಲ್ಲಿ ಮಾಲು ಸಹಿತ ಐವರ ಬಂಧನ
ಮಡಿಕೇರಿ ಜೂ.30 : ಕೊಡಗು ಜಿಲ್ಲಾ ಬೆಟ್ಟಗೇರಿ ಗ್ರಾಮದಿಂದ ಅಕ್ರಮವಾಗಿ ಮರಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಅಪರಾಧ ಪತ್ತೆ ದಳ, ಮಾಲು ಸಹಿತ ಒಟ್ಟು 15 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದು, 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಗಸ್ತಿನಲ್ಲಿದ್ದ ಸಂದರ್ಭ ಮರ ಕಳವು ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತ ಆಧಾರದಲ್ಲಿ ಬೆಟ್ಟಗೇರಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ತೋಟ ಒಂದರಿಂದ ಹಲಸು ಮತ್ತು ಹೆಬ್ಬಲಸು ಮರದ 22 ನಾಟಾಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಆರೋಪಿಗಳು ಕಕ್ಕಬ್ಬೆ ಹಾಗೂ ಪುತ್ತೂರು ಮೂಲದವರಾಗಿದ್ದು, ಮರ ಸಾಗಾಟಕ್ಕೆ ಬಳಸಿದ ೬ ಚಕ್ರದ ಲಾರಿ(ಕೆಎ.46-6956), ಲಾರಿಗೆ ಬೆಂಗಾವಲು ನೀಡಿದ್ದ ಸಿಫ್ಟ್ ಕಾರು(ಕೆಎ.12-ಝೆಡ್ 3113),ಝೆನ್ ಕಾರು(ಕೆಎ.20-ಎನ್.1117) ಸಹಿತ 22 ಮರದ ನಾಟಾಗಳು ಹಾಗೂ 15 ಸಾವಿರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ವತ್ತುಗಳ ಒಟ್ಟು ಮೌಲ್ಯ ೧೫ ಲಕ್ಷ ರೂಪಾಯಿಗಳಾಗಿದೆ ಎಂದು ಜಿಲ್ಲಾ ಅಪರಾಧ ಪತ್ತೆ ದಳ ತಿಳಿಸಿದೆ.
ಪ್ರಕರಣಕ್ಕೆ ಸಂಬಂದಿಸಿದಂತೆ ಕಕ್ಕಬ್ಬೆ ಮೂಲದ ಅಶ್ರಫ್(31), ರಿಯಾಜ್(31), ಪಾಲೂರು ನಿವಾಸಿ ಅಬ್ದುಲ್ ರಹೀಂ(30), ಲಾರಿ ಚಾಲಕ ಪುತ್ತೂರಿನ ಆರೀಸ್(26) ಹಾಗೂ ಲಾರಿ ಕ್ಲೀನರ್ ಪುತ್ತೂರಿನ ರಿಯಾಜ್(25) ಎಂಬವವರನ್ನು ಬಂದಿಸಿದ್ದಾರೆ. ಆರೋಪಿಗಳ ವಿರುದ್ದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಮಹೇಶ್, ಸಹಾಯಕ ಉಪ ನಿರೀಕ್ಷಕ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ವಸಂತ, ವೆಂಕಟೇಶ್, ಚಾಲಕರಾದ ಶಶಿಕುಮಾರ್,ಗ್ರಾಮಾಂತರ ಠಾಣಾ ಉಪ ನಿರೀಕ್ಷಕ ಚೇತನ್, ಪ್ರೊಬೇಷನರಿ ಪಿ.ಎಸ್.ಐ. ಶೇಷಾದ್ರಿ, ತೀರ್ಥಕುಮಾರ್, ಕಲ್ಲಪ್ಪ ಹಿಟ್ನಾಳ್ ಪಾಲ್ಗೊಂಡಿದ್ದರು





