ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಮಡಿಕೇರಿಯಲ್ಲಿ ರೈತ ಸಂಘ ಪ್ರತಿಭಟನೆ

ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿರುವ ದಲಿತರು, ಆದಿವಾಸಿಗಳು, ಬಡ ರೈತರು, ಕೂಲಿ ಕಾರ್ಮಿಕರಿಗೆ ಕೃಷಿಭೂಮಿ, ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಉದ್ಯೋಗ  ದೊರಕಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

 ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಾಲ್, ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್.ಸಣ್ಣಪ್ಪ ಅವರುಗಳ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗಾಂಧಿ ಮಂಟಪದ ಬಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಸಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಲ್, ಜಿಲ್ಲೆಯ ಹಲವು ಭಾಗಗಳಲ್ಲಿ ದಲಿತರು, ಆದಿವಾಸಿಗಳೂ ಬಡ ರೈತರ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ,ಸ್ವಂತ ಭೂಮಿ, ನಿವೇಶನ ಇಲ್ಲದೇ ಪರದಾಡುತ್ತಿದ್ದು,  ಉಳ್ಳವರ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡು ಜೀವನ ಸಾಗಿಸುವಂತಾಗಿದೆ. ಇನ್ನು ಹಲವರು ಒಂದು, ಎರಡು ಏಕರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುತ್ತ ಇದ್ದರೂ, ಬಡವರ ಅರ್ಜಿಗಳು ವಿಲೇವಾರಿ ಆಗದೆ ಮೂಲೆ ಸೇರಿವೆಯೆಂದು ಬೇಸರ ವ್ಯಕ್ತಪಡಿಸಿದರು.

ದಿಡ್ಡಳ್ಳಿ ಆದಿವಾಸಿಗಳನ್ನು ಬಸವನಹಳ್ಳಿ ಬ್ಯಾಡಗೊಟ್ಟಗಳಿಗೆ ಸ್ಥಳಾಂತರಿಸಿದ್ದು, ಇಲ್ಲಿರುವವರಿಗೆ ಅಗತ್ಯ ಕೆಲಸವಿಲ್ಲದೆ ಆಹಾರಕ್ಕೆ ಪರದಾಡುವಂತಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಕಡು ಬಡವರು, ಸರ್ಕಾರದ ಪರಿಹಾರ, ಮನೆ, ಮೂಲಭೂತ ಸೌಕರ್ಯಗಳಿಂದ ವಂಚನೆಗೆ ಒಳಗಾಗಿದ್ದಾರೆ. ಸಂಘಟನೆಯ ಮೂಲಕ ಬಡವರ್ಗದ ಮಂದಿಗೆ ನಿವೇಶನ, ಭೂಮಿ, ಹಕ್ಕುಪತ್ರ ನೀಡುವಂತೆ ಸಲ್ಲಿಸಿದ ಮನವಿಗೆ ನ್ಯಾಯ ದೊರಕಿಲ್ಲ.  ಆದ್ದರಿಂದ ಜಿಲ್ಲಾಡಳಿತ ತಮ್ಮ ಬೇಡಿಕೆಗಳಿಗೆ ತಿಂಗಳ ಒಳಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!