ಶಿರೂರು ಶ್ರೀಗಳ ಅಸ್ವಾಭಾವಿಕ ಸಾವಿನ ತನಿಖೆಗೆ ಭಕ್ತವೃಂದ ಸಂಘಟಿತ ಹೋರಾಟ ನಡೆಸಬೇಕು: ಕೇಮಾರು ಶ್ರೀ

ಮೂಲ್ಕಿ : ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಪ್ರಥಮ ವಾರ್ಷಿಕ ಪುಣ್ಯ ಸ್ಮರಣೆಯ ಪ್ರಯುಕ್ತ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದಲ್ಲಿ ಪೂರ್ವಾಶ್ರಮ ಕುಟುಂಬಿಕರಿಂದ ನಡೆದ ಪವಮಾನ ಸೂಕ್ತ ಹೋಮ ಹಾಗೂ ಶ್ರೀಗಳ ಮೃತ್ತಿಕಾರಾಧನೆಯು ನಡೆಯಿತು.

ಈ ಸಂದರ್ಭ ಮಾದ್ಯಮೊಂದಿಗೆ ಮಾತನಾಡಿದ ಕೇಮಾರು ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ , ಶ್ರೀಗಳ ಆಸ್ವಾಭಾವಿಕ ಸಾವಿನ ಬಗ್ಗೆ ಈಗಾಗಲೇ ಸುಮಾರು 1115 ಪುಟಗಳ ಪೊಲೀಸ್ ತನಿಖಾ ವರದಿಯನ್ನು ಪಡೆಯಲಾಗಿದ್ದು ವೈದ್ಯರ ವರದಿ ಹಾಗೂ ಮುಂದೆ ನಡೆದ ತನಿಖೆಗಳು ಶ್ರೀಗಳ ಸಾವಿನ ಅಸ್ವಾಭಾವಿಕತೆಯನ್ನು ಸೂಚಿಸುತ್ತದೆ.

ಈ ಬಗ್ಗೆ ಸೂಕ್ತ ಕಾನೂನು ಕ್ರಮದ ಮೊದಲು ಶ್ರೀ ದೇವರಲ್ಲಿ ಪ್ರಾರ್ಥಿಸಲಾಗಿದೆ. ಈ ಬಗ್ಗೆ ಶ್ರೀಗಳ ಭಕ್ತ ವೃಂದ ಹಾಗೂ ಆತ್ಮೀಯರು ಸಂಘಟಿತರಾಗಿ ಮುಂದಿನ ಕ್ರಮದ ಬಗ್ಗೆ ಯೋಚಿಸಬೇಕಾಗಿದೆ ಎಂದರು. ಈ ಸಂದರ್ಭ ಲಾತವ್ಯ ಆಚಾರ್ಯ ಮಾತನಾಡಿ, ಶ್ರೀಗಳು ಕೌಟುಂಬಿಕ ಬಂಧನ ತ್ಯಜಿಸಿ ಸ್ವಾಮೀಜಿಯಾಗಿದ್ದವರು ಆದರೆ ಅವರ ಪೂರ್ವಾಶ್ರಮದ ಕುಟುಂಬ ಅವರ ಮೇಲಿನ ಪ್ರೀತಿಯಿಂದ ನಡೆಸುವ ವಾರ್ಷಿಕ ಕಾರ್ಯಕ್ರಮವನ್ನು ಪ್ರೀತಿಯ ಶ್ರಾದ್ಧ ಎನ್ನುತ್ತಾರೆ.

ಈ ದಿನ ಮೂಲ್ಕಿ ಸೇರಿ ರಾಜ್ಯದಲ್ಲಿ ಐದು ಕಡೆ ಕಾರ್ಯಕ್ರಮಗಳು ನಡೆಯುತ್ತದೆ ಎಂದರು. ಈ ಸಂದರ್ಭ ದೇವಳದ ಹೊರ ಪ್ರಾಂಗಣದಲ್ಲಿ ನಡೆದ ಪವಮಾನ ಸೂಕ್ತ ಹೋಮದ ಪೂರ್ನಾಹುತಿಯಲ್ಲಿ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಭಾಗವಹಿಸಿ ಶ್ರೀ ಕ್ಷೇತ್ರದ ಆದಿಜನಾರ್ದನ ದೇವರ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ರಾಮಮೂರ್ತಿ ರಾವ್,ಪಟೇಲ್ ವಾಸುದೇವ ರಾವ್ ಪುನರೂರು ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ಹಾಗೂ ಶ್ರೀಗಳ ಕುಟುಂಬಸ್ಥರು ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!